ಪುತ್ತೂರು: ನಾವು ಹುಟ್ಟಿದ ಮಣ್ಣು, ಜನ್ಮ ನೀಡಿದ ತಾಯಿ ಮತ್ತು ಮಾತೃ ಭಾಷೆಯ ಋಣ ತೀರಿಸುವ ಕೆಲಸ ಮಾಡಬೇಕು. ಮಣ್ಣಿನ ಭಾಷೆಯ ಬೆಳವಣಿಗೆ ಸಹಕರಿಸುವ ಗುಣ ನಮ್ಮಲ್ಲಿ ಬೆಳೆಯಬೇಕು ಎಂದು ಸಂಪ್ಯ ಅನ್ನಪೂರ್ಣೇಶ್ವರಿ ದೇವಳದ ಧರ್ಮದರ್ಶಿಯಾದ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಹೇಳಿದರು.
ಪುತ್ತೂರಿನ `ಭಾರತ್ ಸಿಮಿಮಾಸ್’ ಚಿತ್ರಮಂದಿರದಲ್ಲಿ ಶುಕ್ರವಾರ ಅವರು `ಯಾನ್ ಸೂಪರ್ ಸ್ಟಾರ್’ ತುಳು ಚಲನ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೂರದ ಮುಂಬೈಯಲ್ಲಿ ನೆಲೆಸಿರುವ ಯಾನ್ ಸೂಪರ್ ಸ್ಟಾರ್ ತಂಡದವರು ಈ ಚಿತ್ರದ ಮೂಲಕ ತುಳು ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದು, ಅವರ ಶ್ರಮಕ್ಕೆ ಜನಪ್ರೀತಿ, ಜನಮನ್ನಣೆ ಸಿಗುವಂತಾಗಲಿ ಎಂದು ಅವರು ಆಶಿಸಿದರು.
ಮುಖ್ಯ ಅತಿಥಿಯಾಗಿದ್ದ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ಕುಮಾರ್ ಪುತ್ತಿಲ ಅವರು ಮಾತನಾಡಿ, ತುಳು ಭಾಷೆಗೆ ಅಧಿಕೃತ ಸ್ಥಾನಮಾನ, ತುಳು ರಾಜ್ಯ ಸ್ಥಾಪನೆಯ ಕಲ್ಪನೆಯ ನಡುವೆ ಈ ಚಿತ್ರ ತಂಡದಿಂದ ತುಳು ಭಾಷೆಗೆ ಗೌರವ ತರುವ ಕೆಲಸ ಆಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಉದ್ಯಮಿ ಶಿವರಾಮ ಆಳ್ವ ರಾಜ್ಕುಮಾರ್ ಶೆಟ್ಟಿ ತುಂಬೆ, ಜಗನ್ನಾಥ ಶೆಟ್ಟಿ, ಪ್ರವೀಣ್ ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು. ಸಿನೇಮಾ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಶಿಕ್ಷಕ ಬಾಲಕೃಷ್ಣ ಪೋರ್ದಲು ಉಪಸ್ಥಿತರಿದ್ದರು.