ಚಿತ್ರದುರ್ಗ: ಅಯೋಧ್ಯೆಯಲ್ಲಿ ವಿಘ್ನನಿವಾರಕ ವಿನಾಯಕನ ಮೂರ್ತಿಯ ಕೆತ್ತನೆಯ ಅವಕಾಶ ಕೋಟೆನಾಡಿನ ಯುವಶಿಲ್ಪಿ ಕೀರ್ತಿ ನಂಜುಂಡಸ್ವಾಮಿ ಅವರಿಗೆ ಲಭಿಸಿದೆ.
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕೈಂಕರ್ಯ ಮುಗಿದ ಬಳಿಕ ಮತ್ತೆ 2 ವರ್ಷ ಇನ್ನಿತರೆ ಕೆತ್ತನೆ ಕಾರ್ಯದ ಜವಾಬ್ದಾರಿಯನ್ನೂ ಅಯೋಧ್ಯೆಯಲ್ಲಿಯೇ ಶಿಲ್ಪಿ ಕೀರ್ತಿ ಮುಂದುವರಿಸಲಿದ್ದಾರೆ.
ಅಯೋಧ್ಯೆಯ ಭವ್ಯ ಶ್ರೀರಾಮಮಂದಿರ ಸ್ಥಳಕ್ಕೆ ಡಿ. 7ರಂದು ಶಿಲ್ಪಿ ತೆರಳಿದ್ದು, ಎರಡು ಮುಕ್ಕಾಲು ಅಡಿ ಎತ್ತರದ ಗಣಪತಿ ವಿಗ್ರಹ ಕೆತ್ತನೆಗೆ ಒಂದೂವರೆ ತಿಂಗಳ ಕಾಲಾವಕಾಶ ನೀಡಲಾಗಿದೆ. ಹೀಗಾಗಿ ದೇವತಾ ಕಾರ್ಯದಲ್ಲಿ ತಲ್ಲೀನರಾಗಿ ಕೆತ್ತನೆಯಲ್ಲಿ ನಿರತರಾಗಿದ್ದಾರೆ.
ನಗರದ ಕೋಟೆ ರಸ್ತೆಯ ನಿವಾಸಿ ಕೆ.ನಂಜುಂಡಸ್ವಾಮಿ, ಶಾರದಾ ದಂಪತಿಯ ಪುತ್ರ ಕೀರ್ತಿ ಶಿಲ್ಪಕಲೆಯನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿದ್ದಾರೆ. ಕಾರ್ಕಳದ ಕೆನರಾ ಇನ್ಸ್ಟಿಟ್ಯೂಟ್ನಲ್ಲಿ ಶಿಲ್ಪಕಲೆಯಲ್ಲಿ ಶಿಕ್ಷಣ ಪಡೆದಿದ್ದು, 9 ವರ್ಷ ಹಲವು ಶಿಲ್ಪಿಗಳ ಬಳಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಕೀರ್ತಿ ಆಂಜನೇಯ, ಬೀರಲಿಂಗೇಶ್ವರ, ಗಣಪತಿ, ಸಿಂಹ, ಚೌಡೇಶ್ವರಿ, ತಿರುಪತಿ ತಿಮ್ಮಪ್ಪ, ಮಡಿವಾಳ ಮಾಚಿದೇವ, ಸೇವಾಲಾಲ್ ಸೇರಿ 35ಕ್ಕೂ ಹೆಚ್ಚು ವಿಗ್ರಹ ಕೆತ್ತಿದ್ದಾರೆ.