ಅ.28ರಂದು ಅಂಗವಿಕಲರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಉಡುಪಿ: ಅಂಗವಿಕಲರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಇದೇ ಅ. 28ರಂದು 9.30ಕ್ಕೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ದಿವ್ಯಾಂಗರ ರಕ್ಷಣಾ ವೇದಿಕೆಯ ಸಂಚಾಲಕ ವಿಜಯ ಕೊಡವೂರು ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಮಣಿಪಾಲ ಕಾಯಿನ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಾಡಿಗೆ ಜಾಥ ನಡೆಯಲಿದೆ. ಬಳಿಕ ಪ್ರತಿಭಟನೆ ಆರಂಭವಾಗಲಿದೆ ಎಂದರು.

ಅಂಗವಿಕಲರು ಅತ್ಯಂತ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಅನೇಕರು ಬೀದಿಯಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದಾರೆ. ಶೇ. 60ರಷ್ಟು ಅಂಗವಿಕಲರು ಪರವಾಲಂಬಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ನೀಡುವ 800ರಿಂದ 1400ರೂ.ಗಳ ಮಾಸಾಶನ ಯಾವುದಕ್ಕೂ ಸಾಲುತ್ತಿಲ್ಲ. ಅಂಗವಿಕಲತೆಯ ಅನುಗುಣವಾಗಿ ಬೇಕಾಗುವ ಕನಿಷ್ಠ ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಜೀವನ ನಿರ್ವಹಣೆಗೆ ಕನಿಷ್ಠ 10,000ರೂ. ಗಳನ್ನಾದರೂ ನೀಡಬೇಕೆಂಬುವುದು ನಮ್ಮ ಬೇಡಿಕೆಯಾಗಿದೆ ಎಂದರು.

ಶೇ. 74 ವರೆಗಿನ ಅಂಗವೈಕಲ್ಯ ಹೊಂದಿರುವವರಿಗೆ ಮಾಸಿಕ ರೂ. 5 ಸಾವಿರ ಜೀವನ ಭತ್ಯೆಯಾಗಿ ನೀಡಬೇಕು. ಅಂಗವಿಕಲರ ಹಕ್ಕುಗಳ ಕಾಯ್ದೆ – 2016ನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ತೀವ್ರ ಅಂಗವಿಕಲತೆಯುಳ್ಳವರನ್ನು ನೋಡಿಕೊಳ್ಳಲು ಆರೈಕೆದಾರರಿಗೆ ಅಂಗವಿಕಲರ ಪೋಷಣಾ ಭತ್ಯೆಯಾಗಿ ಮಾಸಿಕ 3 ಸಾವಿರ ರೂ.ಗಳನ್ನು ನೀಡಬೇಕು. ಗ್ರಾಮೀಣ ಮತ್ತು ನಗರ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಟ ವೇತನ ನೀಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂತೋಷ್ ಜಾಲಾಡಿ, ರವೀಂದ್ರ ಹೆಮ್ಮಾಡಿ, ನಿತೇಶ್ ಮಲ್ಪೆ, ಹರೀಶ್ ಶೆಟ್ಟಿ ಅಜ್ರಿ, ಸಿದ್ದಬಸಯ್ಯಸ್ವಾಮಿ ಸಿದ್ದಮಠ ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *