ಬೆಂಗಳೂರು: ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್ ಮ್ಯಾನರ್ಸ್‘ ಸಿನಿಮಾ ಇದೇ ತಿಂಗಳ ಕೊನೆಯ ವಾರ ಬಿಡುಗಡೆ ಆಗಲಿದೆ. ಸಿನಿಮಾದ ಟೀಸರ್ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆಯನ್ನು ನಟ ದರ್ಶನ್, ನಟಿ, ಸಂಸದೆ ಸುಮಲತಾ ಅಂಬರೀಶ್ ಮಾಡಿದ್ದಾರೆ.
ಬಳಿಕ ಮಾತನಾಡಿದ ನಟ ದರ್ಶನ್, ”ಸೂರಿ ಅವರ ಸಿನಿಮಾಗಳು ಭಿನ್ನವಾಗಿರುತ್ತವೆ. ಅವರದ್ದೇ ಆದ ದಾರಿಯಲ್ಲಿ ಅವರು ಸಿನಿಮಾ ಮಾಡುತ್ತಾರೆ. ಅವರ ಸಿನಿಮಾಗಳಲ್ಲಿ ಸಮಾಜವನ್ನು ಹಾನಿ ಮಾಡುತ್ತಿರುವ ವಿಷಗಳಿರುತ್ತವೆ. ಈ ಹಿಂದೆ ಡ್ರಗ್ಸ್ ಇತ್ತು. ಈ ಸಿನಿಮಾದಲ್ಲಿ ಗನ್ ಇದೆ. ಯುವಕರು ಹೇಗೆ ಗನ್ಗಳನ್ನು ಬಳಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಬಗ್ಗೆ ಸೂರಿಯವರು ಸಿನಿಮಾ ಮಾಡಿದ್ದಾರೆ” ಎಂದಿದ್ದಾರೆ ನಟ ದರ್ಶನ್.
ಅಭಿಷೇಕ್ ಅಂಬರೀಶ್ ಬಗ್ಗೆ ಮಾತನಾಡಿದ ನಟ ದರ್ಶನ್, ”ಮೊದಲ ಸಿನಿಮಾಗೂ ಈ ಸಿನಿಮಾಕ್ಕೂ ಅಭಿಷೇಕ್ ಅಂಬರೀಶ್ ಬಹಳ ಬದಲಾಗಿದ್ದಾರೆ. ಅವರ ಆಕ್ಟಿಂಗ್ ಸ್ಕಿಲ್ ಬದಲಾಗಿದೆ, ಸ್ಟೈಲ್ ಬದಲಾಗಿದೆ, ಇದಕ್ಕೆ ಸೂರಿಯವರೇ ಕಾರಣ. ಇಷ್ಟು ದಿನ ಅವನನ್ನು ‘ಯಂಗ್ ರೆಬಲ್ ಸ್ಟಾರ್’ ಎನ್ನುತ್ತಿದ್ದಿರಿ, ಇನ್ನು ಮುಂದೆ ಅವರು ‘ರಿಯಲ್ ರೆಬಲ್ ಸ್ಟಾರ್’. ಅಭಿ ಈ ಸಿನಿಮಾದಲ್ಲಿ ನೋಡಲು ಸಹ ಬಹಳ ಮುದ್ದಾಗಿ ಕಾಣುತ್ತಿದ್ದಾರೆ. ನವೆಂಬರ್ 24ಕ್ಕೆ ಬಿಡುಗಡೆ ಆಗಲಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ವೀಕ್ಷಿಸಿ ಎಂದರು.