ರೈಲ್ವೇ ನೌಕರನನ್ನು ಹೊಡೆದು ಕೊಂದ ಪ್ರಯಾಣಿಕರು – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಬಿಹಾರ: ರೈಲ್ವೇ ನೌಕರನೊಬ್ಬ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಎಂಬ ಕಾರಣಕ್ಕೆ ಆತನನ್ನು ಹೊಡೆದು ಕೊಂದ ಘಟನೆ ಬಿಹಾರದ ಬರೌನಿಯಿಂದ ದೆಹಲಿಗೆ ತೆರಳುತ್ತಿದ್ದ ಹಮ್ಸಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ.

ಆತನ ಕಿರುಕುಳದಿಂದ ಹೆದರಿದ ಬಾಲಕಿ ಕೂಡಲೇ ಕುಟುಂಬಸ್ಥರಿಗೆ ದೂರು ನೀಡಿದ್ದಾಳೆ. ಇದರಿಂದ ಕುಪಿತಗೊಂಡ ಬಾಲಕಿಯ ಕುಟುಂಬಸ್ಥರು ಹಾಗೂ ಇತರೆ ಪ್ರಯಾಣಿಕರು ವ್ಯಕ್ತಿಯನ್ನು ಥಳಿಸಿ ಸ್ಥಳದಲ್ಲೇ ಕೊಂದು ಹಾಕಿದ್ದಾರೆ. ಮಾಹಿತಿ ಪ್ರಕಾರ ಬಿಹಾರದ ಸಿವಾನ್‌ನ ಕುಟುಂಬವೊಂದು ಹಮ್ಸಫರ್ ಎಕ್ಸ್‌ಪ್ರೆಸ್ ಮೂರನೇ ಎಸಿ ಕೋಚ್‌ನಲ್ಲಿ ಬುಧವಾರ ಪ್ರಯಾಣಿಸುತ್ತಿರುವ ವೇಳೆ, ಅದೇ ಕೋಚ್‌ನಲ್ಲಿ ರೈಲ್ವೆ ಉದ್ಯೋಗಿ ಪ್ರಶಾಂತ್ ಕುಮಾರ್ ಪ್ರಯಾಣಿಸುತ್ತಿದ್ದನು. ಆ ಕುಟುಂಬದ 11 ವರ್ಷದ ಬಾಲಕಿಯನ್ನು ಈತ ತನ್ನ ಸೀಟಿನಲ್ಲಿ ಕೂರಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಈ ಕ್ರಮದಲ್ಲಿ ಬುಧವಾರ ರಾತ್ರಿ 11.30ಕ್ಕೆ ಬಾಲಕಿಯ ತಾಯಿ ವಾಶ್ ರೂಂಗೆ ಹೋದಾಗ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಅವಳು ತನ್ನ ತಾಯಿಯನ್ನು ವಾಶ್‌ರೂಮ್‌ಗೆ ಕರೆದೊಯ್ದು ನಡೆದದ್ದನ್ನು ಹೇಳಿದಳು. ರೈಲ್ವೇ ಉದ್ಯೋಗಿ ಪ್ರಶಾಂತ್ ಕುಮಾರ್ ವರ್ತನೆಯ ಬಗ್ಗೆ ಮಹಿಳೆ ತನ್ನ ಪತಿ, ಚಿಕ್ಕಪ್ಪ ಮತ್ತು ಕೋಚ್‌ನಲ್ಲಿದ್ದ ಇತರ ಪ್ರಯಾಣಿಕರಿಗೆ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಕುಟುಂಬಸ್ಥರು ಹಾಗೂ ಇತರೆ ಪ್ರಯಾಣಿಕರು ಚಲಿಸುತ್ತಿದ್ದ ರೈಲಿನಲ್ಲಿ ಹಲವು ಗಂಟೆಗಳ ಕಾಲ ಆತನನ್ನು ಮನಬಂದಂತೆ ಥಳಿಸಿದ್ದಾರೆ.

ಮರುದಿನ ರೈಲು ಗುರುವಾರ ಬೆಳಿಗ್ಗೆ 4.30 ರ ಸುಮಾರಿಗೆ ಉತ್ತರ ಪ್ರದೇಶದ ಕಾನ್ಪುರ ಕೇಂದ್ರ ನಿಲ್ದಾಣವನ್ನು ತಲುಪಿದ್ದು, ಪ್ರಯಾಣಿಕರು ಸರ್ಕಾರಿ ರೈಲ್ವೆ ಪೊಲೀಸರಿಗೆ ಪ್ರಶಾಂತ್ ಕುಮಾರ್ ನನ್ನು ಒಪ್ಪಿಸಿದ್ದಾರೆ. ಬಾಲಕಿಗೆ ಕಿರುಕುಳ ನೀಡಿದ್ದಾನೆ ಎಂದು ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ರೈಲ್ವೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *