ನವದೆಹಲಿ: ಕಾಶ್ಮೀರದ ಶಾರದಾ ದೇಗುಲದ ಜಾಗವನ್ನು ಆಕ್ರಮಿಸಿದ ಪಾಕ್ ಸೇನೆ ಅಲ್ಲಿ ತೆರೆದ ಕಾಫಿ ಶಾಪ್ ತೆರವುಗೊಳಿಸುವಂತೆ ಸೇವಾ ಶಾರದಾ ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಈ ಬಗ್ಗೆ ಮಾತನಾಡಿದ ಸಮಿತಿಯ ಸಂಸ್ಥಾಪಕ ರವಿಂದ್ರ ಪಂಡಿತ್, ʼ ಪಾಕ್ ನ್ಯಾಯಾಲಯ ದೇವಾಲಯದ ಪರವಾಗಿ ಜ.೩ರಂದು ಆದೇಶ ನೀಡಿದ್ದರೂ ಅದನ್ನು ಲೆಕ್ಕಿಸದೆ ಆ ಜಾಗದಲ್ಲಿ ಪಾಕಿಸ್ತಾನದ ಸೇನೆ ಕಾಫಿ ಶಾಪ್ ತೆರೆದಿದೆ. ಇದಕ್ಕಾಗಿ ದೇವಾಲಯವನ್ನು ಆಕ್ರಮಿಸಿ ಶಿಥಿಲಗೊಳಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೂ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆʼ ಎಂದರು.
ಮುಂದುವರೆದು ಮಾತನಾಡಿದ ಅವರು, ʼತೆರವಿನ ಕಾರ್ಯ ಶೀಘ್ರವಾಗಿ ಆಗದಿದ್ದಲ್ಲಿ ಗಡಿ ನಿಯಂತ್ರಣ ರೇಖೆಯವರೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಮತ್ತು ಇದಕ್ಕಾಗಿ ಶಾರಾದಾ ಭಕ್ತರು ಸಿದ್ಧರಾಗಬೇಕು. ಶಾರದಾ ಪೀಠವನ್ನು ಯುನೆಸ್ಕೋ ಪಾರಂಪರಿಕ ತಾಣವೆಂದು ಘೋಷಿಸಬೇಕುʼ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ತೀತ್ವಾಲ್ ನಲ್ಲಿ ನಿರ್ಮಿಸಲಾಗಿದ್ದ ಶಾರದಾ ಪೀಠ ಮತ್ತು ಗುರುದ್ವಾರವನ್ನು ಗಲಭೆಯಲ್ಲಿ ಸುಡಲಾಗಿತ್ತು. ನಂತರ ಶೃಂಗೇರಿ ಮಠದ ಸಹಾಯದೊಂದಿಗೆ ಪುನಃ ನಿರ್ಮಾಣವಾದ ಹೊಸ ದೇವಸ್ಥಾನವನ್ನು ಗೃಹಸಚಿವ ಅಮಿತ್ ಶಾ ಉದ್ಘಾಟಿಸಿದ್ದು, ಮಾರ್ಚ್ ನಂತರ ಸುಮಾರು ೧೦ ಸಾವಿರ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ.