ಜನಪ್ರಿಯ ನಿರ್ಮಾಪಕರಾಗಿದ್ದು ಬಳಿಕ ಹಣ ಆಸ್ತಿ ಕಳೆದುಕೊಂಡು ಚಿಕಿತ್ಸೆಗೂ ಹಣವಿಲ್ಲದೆ ಪರದಾಡಿದ್ದ ನಿರ್ಮಾಪಕ ದೊರೈ ನಿಧನ ಹೊಂದಿದ್ದಾರೆ. ಹಣ ಆಸ್ತಿ ಕಳೆದುಕೊಂಡು ನಿರ್ಗತಿಕರಂತಾಗಿದ್ದ ದೊರೈಗೆ ನಟ ರಜನೀಕಾಂತ್ ಸೇರಿ ಹಲವರು ಸಹಾಯ ಮಾಡಿದ್ದರು. ಆದರೆ ಡಯಾಬಿಟೀಸ್ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ದೊರೈ ಅಕ್ಟೋಬರ್ 2ರ ತಡರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.
ದೊರೈ, 90 ಹಾಗೂ 2000 ದಶಕದಲ್ಲಿ ಜನಪ್ರಿಯ ನಿರ್ಮಾಪಕ, ವಿತರಕ ಹಾಗೂ ಸಿನಿಮಾ ಫೈನ್ಯಾನ್ಶಿಯರ್ ಆಗಿದ್ದರು. ವಿಕ್ರಂ-ಸೂರ್ಯ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಪಿತಾಮಗನ್’, ವಿಜಯ್ಕಾಂತ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಗಜೇಂದ್ರ’, ಸತ್ಯರಾಜ್ ನಟನೆಯ ‘ಎನ್ನಮ್ಮ ಕನ್ನೆ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಜೊತೆಗೆ ರಜನೀಕಾಂತ್ರ ಜನಪ್ರಿಯ ಸಿನಿಮಾ ‘ಬಾಬಾ’ಕ್ಕೆ ಫೈನ್ಯಾನ್ಸ್ ಮಾಡಿದ್ದರು, ಹಾಗೂ ವಿಕ್ರಂ ಸ್ಟಾರ್ ಆಗಲು ಕಾರಣವಾದ ‘ಸೇತು’ ಸಿನಿಮಾಕ್ಕೂ ಫೈನಾನ್ಸ್ ಮಾಡಿದ್ದರು.
ದೊರೈ ನಿಧನಕ್ಕೆ ನಟ, ರಾಜಕಾರಣಿ ವಿಜಯ್ಕಾಂತ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.