ಉಡುಪಿ: ಹಾಡಹಗಲೇ ಜನವಸತಿ ಪ್ರದೇಶದ ಮನೆಯೊಂದರ ಬಾಗಿಲು ಒಡೆದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಸಹಿತ ನಗದು ದೋಚಿ ಪರಾರಿಯಾದ ಘಟನೆ ಕುಂದಾಪುರ ಹೊರವಲಯದಲ್ಲಿರುವ ಹಂಗಳೂರು ಸಮೀಪದ ಬ್ರಹ್ಮಗುಡಿ ಎಂಬಲ್ಲಿ ನಡೆದಿದೆ.
ಬ್ರಹ್ಮಗುಡಿ ಜಗದೀಶ್ ಚಂದ್ರ ನಾಯರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಮೂಲತಃ ಕೇರಳದವರಾಗಿದ್ದು, ಪತ್ನಿ ಹಾಗೂ ಮಗಳೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ. ಪತಿ ಪತ್ನಿ ಇಬ್ಬರೂ ಕುಂದಾಪುರದಲ್ಲಿ ಪ್ರಿಂಟಿಂಗ್ ಪ್ರೆಸ್ ಕೆಲಸ ಮಾಡಿಕೊಂಡಿದ್ದಾರೆ. ಅವರ ಮಗಳು ಶಾಲೆಗೆ ಹೋಗುತ್ತಿದ್ದಾಳೆ.
ಗುರುವಾರ ಮಧ್ಯಾಹ್ನ 2 ಗಂಟೆಗೆ ಜಗದೀಶ್ ಚಂದ್ರ ಹಾಗೂ ಪತ್ನಿ ಮನೆಯಲ್ಲಿ ಊಟ ಮಾಡಿ ಪ್ರೆಸ್ ಗೆ ಹೋಗಿದ್ದರು. ಸಂಜೆ 4 ಗಂಟೆಗೆ ಜಗದೀಶ್ ಅವರ ಪತ್ನಿ ಮಗಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬಂದಾಗ ಅನುಮಾನ ಬಂದು ಹಿಂಬದಿ ಹೋಗಿ ನೋಡಿದಾಗ ಮನೆಯ ಹಿಂಬದಿಯ ಬಾಗಿಲು ಒಡೆದು ದರೋಡೆ ನಡೆಸಿರುವುದು ತಿಳಿದುಬಂದಿದೆ. ಕುಂದಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.