ಚಾಮರಾಜನಗರ: ಕೇರಳ ಮೂಲದ ನಾಲ್ವರು ಯುವಕರು ಕೂದಲು ಮಾರುವ ಬಾಲಕಿಯನ್ನು ಅಪಹರಣ ಮಾಡಿದ್ದ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಕೇರಳದ ರಾಜ್ಯದ ಮಲ್ಲಪ್ಪುರಂ ಜಿಲ್ಲೆಯ ಯಡಪಾಡ್ ಗ್ರಾಮದ ಇಸ್ಮಾಯಿಲ್, ಅಯೋಬ್, ಆಲಿ, ಉಮರ್ ಬಂಧಿತ ಆರೋಪಿಗಳು. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಗೆಜ್ಜನಹಳ್ಳಿ ಗ್ರಾಮದ ಬಾಲಕಿ ಕುಟುಂಬ ಸಮೇತವಾಗಿ ಬಂದು ಕೂದಲು ಮಾರುತ್ತಿದ್ದರು.
ನಗರದ ವಾಸವಿ ವಿದ್ಯಾ ಕೇಂದ್ರದ ಮುಂಭಾಗದಲ್ಲಿ ಅಂದಾಜು 16 ವರ್ಷದ ಬಾಲಕಿಯು ಕೂದಲು ಮಾರುತ್ತಿದ್ದಳು. ಈ ವೇಳೆ ನಾಲ್ಕು ಮಂದಿ ಯುವಕರು ಕುಡಿದ ಮತ್ತಿನಲ್ಲಿ ಬಂದು ಬಾಲಕಿಗೆ ಚಾಕಲೇಟ್ ನೀಡಿ ನಿನಗೆ ಊಟ ಕೊಡಿಸುತ್ತೇನೆ ಎಂದು ಹೇಳಿ ಕಾರಿನಲ್ಲಿ ಕೂರಿಸಿ ಕೊಂಡು ತಾಲ್ಲೂಕಿನ ಮಧುವನ ಹಳ್ಳಿ ಗ್ರಾಮದಲ್ಲಿ ಹೋಗುತ್ತಿದ್ದರು.
ಈ ಸಂದರ್ಭದಲ್ಲಿ ಕಾರು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗ್ರಾಮಸ್ಥರು ಕಾರನ್ನು ತಡೆದರು. ನಂತರ ಗ್ರಾಮಸ್ಥರು ಕಾರನ್ನು ಪರಿಶೀಲಿಸಿದ ವೇಳೆ ನಾಲ್ಕು ಮಂದಿ ಯುವಕರು ಕುಡಿದ ಮತ್ತಿನಲ್ಲಿ ತೇಲುತ್ತಿದ್ದು ಬಾಲಕಿಯ ಬಾಯಿಯನ್ನು ಮುಚ್ಚಿ ಕರೆದೊಯ್ಯವಾಗ ಇದ್ದಕ್ಕಿದ್ದಂತೆ ಬಾಲಕಿ ನನ್ನನ್ನು ಅಪಹರಣ ಮಾಡಿದ್ದಾರೆ ಎಂದು ಜೋರಾಗಿ ಕಿರುಚಿಕೊಂಡು ಅಳಲು ಆರಂಭಿಸಿದ್ದಾಳೆ. ನಂತರ ಗ್ರಾಮಸ್ಥರು ನಾಲ್ಕು ಮಂದಿಗೆ ಗೂಸ ಕೊಟ್ಟು ಗ್ರಾಮದ ಅಂಬೇಡ್ಕರ್ ಭವನದ ಮುಂದೆ ಕೊರಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.