ಬೆಂಗಳೂರು: ವಿದ್ಯಾರ್ಥಿಯೋರ್ವ ಹುಷಾರಿಲ್ಲ ಎಂದು ಎರಡು ದಿನ ಕಾಲೇಜಿಗೆ ರಜೆ ಹಾಕಿದ್ದವನು ತಂದೆಯ ಡಬಲ್ ಬ್ಯಾರೆಲ್ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ರಿಶಿ ಉತ್ತಪ್ಪ ಎಂದು ಗುರುತಿಸಲಾಗಿದೆ.
ಈತ ಆರ್ ವಿ ಕಾಲೇಜಿನ ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ. ಬುಧವಾರ ಸಂಜೆ 6.30 ರ ಸುಮಾರಿಗೆ ತನ್ನ ತಾಯಿಗೆ ಕರೆ ಮಾಡಿ ಸಾರಿ ಅಂತೇಳಿ ಕಾಲ್ ಕಟ್ ಮಾಡಿದ್ದಾನೆ. ಮನೆಯಿಂದ ಹೊರಗಡೆ ಇದ್ದ ಹೆತ್ತವರು ಮನೆಗೆ ಬಂದು ನೋಡುವಷ್ಟರಲ್ಲಿ ಮಗನ ಮೈಯಿಂದ ಸುರಿದ ರಕ್ತ ಇಡೀ ಮನೆಯಲ್ಲಿ ತೊಯ್ದುಹೋಗಿತ್ತು. ಸುಮಾರು 2 ಗಂಟೆ ರಕ್ತಸ್ರಾವವಾಗಿ ಆಸ್ಪತ್ರೆಗೆ ಕರೆತಂದ 10 ನಿಮಿಷದಲ್ಲೇ ಸಾವನ್ನಪ್ಪಿದ್ದಾನೆ.
ರಿಶಿ ಉತ್ತಪ್ಪ ತಂದೆ ರವಿ ತಿಮ್ಮಯ್ಯ ನೈಸ್ ಕಂಪನಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದು 20 ವರ್ಷಗಳ ಹಿಂದೆ ಕೊಡಗಿನಿಂದ ಬೆಂಗಳೂರಿಗೆ ಬಂದು ದುಡಿಯೋಕೆ ಶುರು ಮಾಡಿದ್ದರು. ಸಹಜವಾಗೆ ಸೆಕ್ಯುರಿಟಿ ಕೆಲಸ ಆದ್ರಿಂದ ಇವರಿಗೆ ಲೈಸೆನ್ಸ್ಡ್ ಡಬಲ್ ಬ್ಯಾರೆಲ್ ಗನ್ ನೀಡಲಾಗಿತ್ತು. ಬುಧವಾರ ಸಂಜೆ ತಂದೆಯ ಡಬಲ್ ಬ್ಯಾರೆಲ್ ಗನ್ ನಿಂದ ರಿಶಿ ಉತ್ತಪ್ಪ ಎದೆಗೆ ಶೂಟ್ ಮಾಡಿಕೊಂಡಿದ್ದಾನೆ.
ಇನ್ನೂ ಹೆಚ್ಚಿನ ಮಾರ್ಕ್ಸ್ ತೆಗಿ ಅಂತಾ ತಂದೆ ರವಿ ತಿಮ್ಮಯ್ಯ ಮಗನಿಗೆ ಬುದ್ದಿವಾದ ಹೇಳ್ತಿದ್ರಂತೆ. ಕಳೆದ ಎರಡು ದಿನ ಹುಷಾರಿಲ್ಲ ಅಂತಾ ರಜೆ ಹಾಕಿದ್ದವನು ಇದ್ದಕ್ಕಿದ್ದಂತೆ ಶೂಟ್ ಮಾಡಿಕೊಂಡಿದ್ದಾನೆ. ಮಗನ ಭವಿಷ್ಯ ಚೆನ್ನಾಗಿರಲಿ ಅಂತಾ ಬುದ್ಧಿವಾದ ಹೇಳಿದ ತಂದೆ-ತಾಯಿ, ಇದ್ದ ಒಬ್ಬ ಮಗನನ್ನ ಕಳೆದುಕೊಂಡು ಅನಾಥವಾಗಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821