ಅಯೋಧ್ಯೆ: ಶ್ರೀರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ದೇಶ-ವಿದೇಶಗಳಿಂದ ಭಕ್ತರು ಹಲವು ರೀತಿಯಲ್ಲಿ ಉಡುಗೊರೆಗಳನ್ನು ಅಯೋಧ್ಯೆಗೆ ತಲುಪಿಸುತ್ತಿದ್ದಾರೆ. ಆದ್ರೆ ಗುಜರಾತ್ನ ನವಸಾರಿ ನಗರದ ಕಲಾವಿನೊಬ್ಬ ಸಾವಿರಾರು ರಾಮಭಕ್ತರಿಗೆ ಉಚಿತವಾಗಿ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆಗೆ ಮುಂದಾಗಿದ್ದಾರೆ.
ಕಲಾವಿದ ಜಯ್ ಸೋನಿ ಗುಜರಾತ್ನಲ್ಲಿ ರಾಮನ ಭಕ್ತರಿಗೆ ಉಚಿತವಾಗಿ ಶ್ರೀರಾಮನ ಹೆಸರನ್ನು ಹಚ್ಚೆಹಾಕಲು ಮುಂದಾಗಿದ್ದಾರೆ. ಈಗಾಗಲೇ ಅಭಿಯಾನ ಶುರು ಮಾಡಿದ್ದು 200 ಭಕ್ತರ ಕೈಯಲ್ಲಿ ʻಶ್ರೀರಾಮʼನ ಹೆಸರನ್ನು ಹಚ್ಚೆಹಾಕಿದ್ದಾರೆ, ಇನ್ನೂ 700 ಮಂದಿಗೆ ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಜನವರಿ 22ರಂದು ರಾಮಮಂದಿರ ಉದ್ಘಾಟನೆಯಾಗುವ ವೇಳೆಗೆ ಕನಿಷ್ಠ 1,000 ಮಂದಿಗೆ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದಾಗ ನನ್ನ ಕಡೆಯಿಂದ ಏನು ಸೇವೆ ಮಾಡಬಹುದೆಂದು ನಾನು ಯೋಚಿಸುತ್ತಿದ್ದೆ. ಟ್ಯಾಟೂ ಕಲಾವಿದನಾಗಿರುವುದರಿಂದ, ಭಕ್ತರಿಗೆ ಭಗವಾನ್ ಶ್ರೀರಾಮನ ಹೆಸರನ್ನೇ ಉಚಿತವಾಗಿ ಹಚ್ಚೆ ಹಾಕಬೇಕೆಂದು ನಿರ್ಧರಿಸಿದೆ ಎಂಬುದಾಗಿ ಕಲಾವಿದ ಹೇಳಿಕೊಂಡಿದ್ದಾರೆ.