ಜೈಲಿನಲ್ಲಿ ಖೈದಿಗಳ ನಡುವೆ ಗಲಾಟೆ: ಮಾರಕಾಸ್ತ್ರ, ಮೊಬೈಲ್, ಹಣ ವಶ

ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು,ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ.

ಘಟನೆಯ ಬಳಿಕ ಡಿಸಿಪಿ ಅವರ ನೇತೃತ್ವದಲ್ಲಿ ಜೈಲಿನ ಮೇಲೆ ದಾಳಿ ಮಾಡಿದ ಪೊಲೀಸರು, ಮಾರಕಾಸ್ತ್ರ, ಹತ್ತು ಸಾವಿರ ರೂ.ನಗದು ಮತ್ತು ಎರಡು ಮೊಬೈಲ್‍ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಜೈಲಿನಲ್ಲಿ ಇರುವ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗಳ‌ ತಂಡ ಸಹಿತ ಎರಡು ತಂಡಗಳ ಮಧ್ಯೆ ಶನಿವಾರ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಉಂಟಾಗಿದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಪೋಲಿಸರು ಜೈಲಿನ ಮೇಲೆ ಕಾರ್ಯಾಚರಣೆ ಕೈಗೊಂಡು ಮಾರಕಾಸ್ತ್ರ, ಮೊಬೈಲ್ ಹಾಗೂ ಹಣವನ್ನು ಪತ್ತೆ ಹಚ್ಚಿದ್ದರು. ಈಗ ಮತ್ತೆ ಮಾರಕಾಸ್ತ್ರ, ಹಣ ಹಾಗೂ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದು, ಇದರಿಂದ ಜೈಲಿನಲ್ಲಿ ಅಕ್ರಮ ಕೆಲಸಗಳಿಗೆ ಸಿಬ್ಬಂದಿಗಳೇ ಕುಮ್ಮಕ್ಕು ಕೊಡುತ್ತಿದ್ದಾರೆಂಬ ಆರೋಪಗಳು ದಟ್ಟವಾಗಿ  ಕೇಳಿಬರುತ್ತಿವೆ.

ಹಣ ಕೊಟ್ಟವರಿಗೆ ಜೈಲಿನಲ್ಲಿ ಎಲ್ಲವೂ ಸಿಗುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ನಡುವೆ, ಈಗ ಹರ್ಷ ಕೊಲೆ ಪ್ರಕರಣದ ಆರೋಪಿಗಳಲ್ಲಿ ಮಾರಕಾಸ್ತ್ರಗಳು ದೊರೆತಿದ್ದು, ಹಣ ಹಾಗೂ ಮೊಬೈಲ್‍ಗಳು ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಸಂಬಂಧ ಫರತಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *