ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಯವರಿಗೆ ಚೊಂಬು ಪ್ರದರ್ಶನಕ್ಕೆ ಯತ್ನಿಸಿದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶನಿವಾರ ಸಂಜೆ 5 ಗಂಟೆಗೆ ಅರಮನೆ ಮೈದಾನದಲ್ಲಿ ಮೋದಿ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ನಗರದಲ್ಲಿ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಈ ನಡುವೆ ಮೆಖ್ರಿ ವೃತ್ತದ ಬಳಿಯ ಸಿ.ವಿ.ರಾಮನ್ ರಸ್ತೆಯಲ್ಲಿ ತಮ್ಮ ಬೆಂಬಲಿಗರ ಜತೆ ಆಗಮಿಸಿದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹಾಗೂ ಇತರರು ಏಕಾಏಕಿ ಪ್ರಧಾನಿ ಮೋದಿ ಬರುವ ರಸ್ತೆ ಕಡೆ ನುಗ್ಗಲು ಮುಂದಾಗಿ, ಚೊಂಬುಗಳ ಪ್ರದರ್ಶನಕ್ಕೆ ಯತ್ನಿಸಿದರು.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ನಲಪಾಡ್ ಹಾಗೂ ಇತರರಿಂದ ಚೊಂಬು ಕಸಿದುಕೊಂಡರು. ಈ ವೇಳೆ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಆಗ ಪೊಲೀಸರ ಜತೆಯೇ ನಲಪಾಡ್ ವಾಗ್ವಾದ ನಡೆಸಿದ ಪ್ರಸಂಗ ಕೂಡ ನಡೆಯಿತು.
ಚಿಕ್ಕಬಳ್ಳಾಪುರದಿಂದ ನಗರಕ್ಕೆ ಬಂದ ಪ್ರಧಾನಿ ಮೋದಿ ರಸ್ತೆ ಮಾರ್ಗವಾಗಿ ಅರಮನೆ ಮೈದಾನ ಕಡೆ ತೆರಳುತ್ತಿದ್ದರು. ಈ ಮಾಹಿತಿ ಪಡೆದುಕೊಂಡ ನಲಪಾಡ್ ಮತ್ತು ಆತನ ತಂಡ, ಮೇಖ್ರಿ ವೃತ್ತದ ಬಳಿ ಮೊದಲೇ ಕಾರಿನಲ್ಲಿ ಚೊಂಬು ಹಿಡಿದುಕೊಂಡು ಕುಳಿತಿತ್ತು. ಕೆಲವೇ ಕ್ಷಣಗಳಲ್ಲಿ ಮೋದಿ ಅವರು ಮೇಖ್ರಿ ವೃತ್ತದ ಬಳಿ ಬರುತ್ತಿದ್ದಾರೆ ಎಂದು ತಿಳಿದ ಕೂಡಲೇ ಚೊಂಬು ಹಿಡಿದುಕೊಂಡು ಏಕಾಏಕಿ ರಸ್ತೆಗೆ ಬಂದು ಪ್ರದರ್ಶನಕ್ಕೆ ಮುಂದಾದರು.