ಮೈಸೂರು: ಆಷಾಢ ಮಾಸ ಹಿನ್ನೆಲೆಯಲ್ಲಿ ಮೈಸೂರಿನ ಅಧಿದೇವತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಭಕ್ತರ ಅನುಕೂಲ ಮಾಡಿಕೊಡುವ ಸಲುವಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಈ ಬಾರಿ ಜುಲೈ 12, 19, 26, 27(ವರ್ಧಂತಿ) ಹಾಗೂ ಆಗಸ್ಟ್ 02 ರಂದು ಕಡೆಯ ಆಷಾಢ ಶುಕ್ರವಾರ ಈ ಐದು ದಿನಗಳಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಬೆಟ್ಟಕ್ಕೆ ಆಗಮಿಸಲಿದ್ದು, ಅವರ ಅನುಕೂಲಕ್ಕಾಗಿ ದೇವಾಲಯದ ವತಿಯಿಂದ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಚಾಮುಂಡಿಬೆಟ್ಟಕ್ಕೆ ಪ್ರಯಾಣಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಆಷಾಢ ಮಾಸದ ಶನಿವಾರ ಹಾಗೂ ಭಾನುವಾರಗಳಂದು ಸಾರ್ವಜನಿಕ ವಾಹನಗಳನ್ನು ಚಾಮುಂಡಿಬೆಟ್ಟದ ಪ್ರವೇಶಕ್ಕೆ ನಿಷೇಧವಿಧಿಸಿದ್ದು, ಲಲಿತ ಮಹಲ್ ಪಾರ್ಕಿಂಗ್ನಲ್ಲಿಯೇ ಸಾರ್ವಜನಿಕರು ತಮ್ಮ ವಾಹನ ನಿಲ್ಲಿಸಿ, ಕೆಎಸ್ಆರ್ಟಿಸಿ ವಾಹನಗಳ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಪಡೆದು ಚಾಮುಂಡಿಬೆಟ್ಟಕ್ಕೆ ಹೋಗಬಹುದು. ಚಾಮುಂಡಿಬೆಟ್ಟದ ಗ್ರಾಮಸ್ಥರು ಈ ಸಮಯದಲ್ಲಿ ಚಾಮುಂಡಿಬೆಟ್ಟ ಗ್ರಾಮದಲ್ಲಿ ವಿಳಾಸವಿರುವ ಆಧಾರ್ ಕಾರ್ಡ್ ಅನ್ನು ಹಾಜರುಪಡಿಸಿ ಪ್ರವೇಶ ಪಡೆಯಬಹುದು.
ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ಪ್ರವೇಶಕ್ಕೆ ಯಾವುದೇ ಪಾಸ್ ವ್ಯವಸ್ಥೆ ಇಲ್ಲವಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿರುವ 300 ರೂಗಳ ಪ್ರವೇಶ, 50 ರೂಗಳ ಪ್ರವೇಶ ಮತ್ತು ಸರ್ವದರ್ಶನದ ಮೂಲಕ ದೇವಾಲಯಕ್ಕೆ ಪ್ರವೇಶ ಪಡೆಯಬಹುದು.
ಭಕ್ತಾಧಿಗಳಿಗೆ ಅನುಕೂಲಕ್ಕಾಗಿ ಲಲಿತಮಹಲ್ ಪಾರ್ಕಿಂಗ್ ಮತ್ತು ಮಹಿಷಾಸುರ ವೃತ್ತದ ಬಳಿ ಹಾಗೂ ವಿಶೇಷ ಪ್ರವೇಶದ ಬಳಿಯಲ್ಲಿಯೇ ಪ್ರವೇಶದ ಟಿಕೆಟ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ತುರ್ತು ಚಿಕಿತ್ಸೆ ವ್ಯವಸ್ಥೆ ಹಾಗೂ ತುರ್ತು ವಾಹನದ ವ್ಯವಸ್ಥೆ ಮಾಡಲಾಗಿದೆ.
ಭಕ್ತಾಧಿಗಳಿಗೆ ಪ್ರಸಾದ ವಿತರಿಸುವ ಸಾರ್ವಜನಿಕರು, ಕಡ್ಡಾಯವಾಗಿ ಪ್ರಸಾದ ವಿತರಿಸುವ ಮೊದಲು ಆಹಾರ ನಿಯಂತ್ರಣ ಇಲಾಖೆಯ ಅಂಕಿತಾಧಿಕಾರಿಗಳಿಂದ ದೃಢೀಕರಣ ಪಡೆದು, ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ಶಾಖೆಯಲ್ಲಿ ಅನುಮತಿ ಪತ್ರ ಪಡೆದು ತಮಗೆ ನಿಗದಿಪಡಿಸಿರುವ ಸಮಯದಲ್ಲಿ ಬಂದು ನಿಗದಿತ ಸ್ಥಳಗಳಲ್ಲಿ ಪ್ರಸಾದವನ್ನು ವಿತರಿಸಬೇಕು ಹಾಗೂ ಆ ಸ್ಥಳವನ್ನು ತಾವೇ ಸ್ವಚ್ಚಗೊಳಿಸಬೇಕಿದೆ.
ಈ ಆಷಾಢ ಮಾಸವನ್ನು ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತ ಆಷಾಢ ಮಾಸವೆಂದು ಘೋಷಿಸಿರುವುದರಿಂದ ಚಾಮುಂಡಿಬೆಟ್ಟಕ್ಕೆ ಯಾವುದೇ ರೀತಿಯ ಪ್ಲಾಸ್ಟಿಕ್ ತರುವುದನ್ನು ನಿಷೇದಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ತಂದಲ್ಲಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಮಾತ್ರವಲ್ಲ, ಬೆಟ್ಟದಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರು, ಯಾವುದೇ ಪ್ಲಾಸ್ಟಿಕ್ ಬಳಸದಂತೆ ಹಾಗೂ ಯಾವುದೇ ಪೂಜಾ ಸಾಮಾಗ್ರಿಗಳನ್ನು ಪ್ಲಾಸ್ಟಿಕ್ ಬ್ಯಾಗ್ ಮತ್ತು ಇತರೆ ಪ್ಲಾಸ್ಟಿಕ್ ಮೂಲಕ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.
ಒಂದು ವೇಳೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ದಂಡ ವಿಧಿಸುವುದಲ್ಲದೆ ಅಂಗಡಿ ತೆರವುಗೊಳಿಸಲು ನಿರ್ಧರಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದ್ದಾರೆ.