ಸಾಂಸ್ಕೃತಿಕ ಚಳುವಳಿಯಾದ ಈ ಬಾರಿಯ ದಸರಾ: ಸಚಿವ ಡಾ.ಹೆಚ್.ಸಿ.ಮಹದೇವಪ್ಪ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು, ಅಕ್ಟೋಬರ್,14,2024 : (www.justkannada.in): ಸಂಗೀತ, ಸಾಹಿತ್ಯ, ಕಲೆ, ಕೃಷಿ, ಹೈನುಗಾರಿಕೆಗೆ, ಕ್ರೀಡೆ, ಮಹಿಳೆಯರ ಕೊಡುಗೆಗಳು, ಜನರ ಜೀವನ ಕ್ರಮ ಹಾಗೂ ಮೌಲ್ಯಗಳು ಅಭಿವ್ಯಕ್ತಿಯಾದ ಈ ಬಾರಿಯ ದಸರಾವು ಸಾಂಸ್ಕೃತಿಕ ಚಳಿವಳಿಯಾಗಿ ಜರುಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಹೇಳಿದರು.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಕುಪ್ಪಣ್ಣ ಉದ್ಯಾನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ “ದಸರಾ ಫಲಪುಷ್ಪ ಪ್ರದರ್ಶನ”ದಲ್ಲಿ ಅತ್ಯುತ್ತಮ ಉದ್ಯಾನ ವಿನ್ಯಾಸಗೊಳಿಸಿದ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಸಚಿವ ಹೆಚ್ ಸಿ ಮಹದೇವಪ್ಪ ಮಾತನಾಡಿದರು.

ರಾಜ್ಯದಲ್ಲಿ ಉತ್ತಮವಾಗಿ ಮಳೆಯಾದ ಕಾರಣ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದ್ದೂರಿ ದಸರಾ ಆಚರಿಸುವಂತೆ ತಿಳಿಸಿದ್ದರು. ಅದರಂತೆ ಜನರಲ್ಲಿ ಸಹೋದರತೆ, ಸೌಹಾರ್ದತೆ, ಘನತೆಯ ಬದುಕನ್ನು ಬಿತ್ತುವಂತೆ ಈ ಬಾರಿಯ ದಸರಾವನ್ನು ಆಚರಿಸಲಾಗಿದೆ. ಧರ್ಮ, ಜಾತಿಗೂ ಮೀರಿದ ಸಮಾಜವನ್ನು ನಿರ್ಮಿಸುವ ಸಂದೇಶ ಸಾರಲಾಗಿದೆ ಎಂದರು.

ಈ ಭಾರಿಯ ದಸರಾ ವಿಭಿನ್ನವಾಗಿತ್ತು ಎಂಬ ಉತ್ತಮ ಅಭಿಪ್ರಾಯ ಜನರಿಂದ ಕೇಳಿಬಂದಿದೆ. ದಸರಾ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿದ್ದು, ಜನರು ಕೂಡ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಜನರ ದಸರಾವಾಗಿ ಪರಿಣಮಿಸಿದೆ. ದಸರಾ ಯಶಸ್ಸಿಗೆ ಮೈಸೂರಿನ ಎಲ್ಲಾ ಜನತೆ ಕಾರಣೀಭೂತರಾಗಿದ್ದಾರೆ. ಈ ಯಶಸ್ವಿ ದಸರಾ ಆಚರಣೆ ಮೂಲಕ ರಾಜ್ಯ ಸರ್ಕಾರಕ್ಕೆ ಸಾಂಸ್ಕೃತಿಕ ಕಿರೀಟ ಇಟ್ಟಂತಾಗಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ. ವಿವಿಧ ಪುಷ್ಪಗಳು ಹಾಗೂ ಸಿರಿಧಾನ್ಯಗಳಿಂದ ಬಗೆಬಗೆಯ ಕಲಾ ಪ್ರಕಾರಗಳನ್ನು ರಚಿಸಿ ಜನರ ಮೆಚ್ಚುಗೆ ಗಳಿಸಲಾಗಿದೆ. ಸುಮಾರು 5 ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿರುವುದು ಸಂತೋಷದ ವಿಚಾರ ಎಂದು ಹೇಳಿದರು.

ಗಾಜಿನಮನೆಯಲ್ಲಿ ಸಿದ್ಧಪಡಿಸಿರುವ `ಪ್ರಜಾಪ್ರಭುತ್ವ ನಡೆದು ಬಂದ ದಾರಿ’ ಎಂಬ ಪರಿಕಲ್ಪನೆಯ ವಿನ್ಯಾಸವು ಆರನೇ ಶತಮಾನದಿಂದ ಇಲ್ಲಿಯವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿತ್ತು ಎಂಬುದನ್ನು ಹೇಳುತ್ತದೆ. ಬುದ್ಧರ ಕಾಲ, ಅನುಭವ ಮಂಟಪ, ಸ್ವಾತಂತ್ರ್ಯ ಚಳುವಳಿ, ಸಂವಿಧಾನ, ಸಂಸತ್ ಭವನ ಎಲ್ಲವನ್ನು ಸುಂದರವಾಗಿ ವಿನ್ಯಾಸಗೊಳಿಸುವ ಮೂಲಕ ಪ್ರಪಂಚಕ್ಕೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ವಿವರಿಸಲಾಗಿದೆ ಎಂದು ಪ್ರಶಂಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ ಅವರು, ತೋಟಗಾರಿಕೆ ಉಪನಿರ್ದೇಶಕರಾದ ಮಂಜುನಾಥ್, ಹಿರಿಯ ಸಹಾಯಕ ನಿರ್ದೇಶಕರಾದ ಹಬೀಬಾ ನಿಶಾತ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Key words: mysore Dasara, cultural movement, Minister, Dr. H. C. Mahadevappa

Font Awesome Icons

Leave a Reply

Your email address will not be published. Required fields are marked *