ಕಲಾವಿದನಿಂದ ನಿರ್ಮಾಪಕನಾಗಿ ಭಡ್ತಿ ಪಡೆಯುತ್ತಿರುವ ಖ್ಯಾತ ನಟ ಗುರು ಹೆಗ್ಡೆ

ಗುರುಪ್ರಸಾದ್ ಹೆಗ್ಡೆ ನಮ್ಮವರು, ನಮ್ಮೂರಿನವರು. ರಂಗಭೂಮಿ, ಸಿನಿಮಾದ ಬಗ್ಗೆ ಆಸಕ್ತಿ ಬೆಳೆಸಿ ಪಡುಬಿದ್ರೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಗುರುಹೆಗ್ಡೆಯಾಗಿ ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸು ಗಳಿಸುತ್ತಾರೆ. ಯಾವುದೇ ಪಾತ್ರಕ್ಕೂ ಜೀವ ತುಂಬುವ ಕಲಾವಿದರಾಗಿ ಬೆಳೆಯುತ್ತಾರೆ. ಈಗ ನಟನಿಂದ ಸಿನಿಮಾ ನಿರ್ಮಾಣಕ್ಕೆ ಭಡ್ತಿ ಪಡೆದಿದ್ದಾರೆ. ಮುಂದೊಂದು ದಿನ ನಿರ್ದೇಶಕನಾಗಿ ಬೆಳೆಯಬೇಕು ಎಂಬ ಹಂಬಲ, ತುಡಿತವೂ ಇದೆ. ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿಯವರೊಂದಿಗೆ ಅಮರ್ಥ ಕನ್ನಡ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ.

ಗುರು ಹೆಗ್ಡೆ- ಇವರದ್ದು ಕನ್ನಡ ಧಾರಾವಾಹಿ ಹಾಗೂ ಸಿನೆಮಾ ರಂಗದಲ್ಲಿ ಪರಿಚಿತ ಹೆಸರು. ಪಡುಬಿದ್ರಿ ಮೂಲದ ಗುರುಪ್ರಸಾದ್‌ ಹೆಗ್ಡೆ ಅವರು ಸಿನಿಮಾ ರಂಗಕ್ಕೆ ಸೇರಿದ ಬಳಿಕ ಹೆಸರನ್ನು ಗುರು ಹೆಗ್ಡೆ ಎಂದು ಬದಲಾಯಿಸಿಕೊಂಡರು. ಅವರ ಪರಿಶ್ರಮ, ನಟನಾ ಕೌಶಲ್ಯ ಹಾಗೂ ಅದೃಷ್ಟದಿಂದಾಗಿ ಯಶಸ್ಸು ಕೈ ಹಿಡಿಯಿತು. ಈಗ ಇವರು ಸಿನಿಮಾ ನಿರ್ಮಾಪಕರಾಗಲು ಮುಂದಾಗಿದ್ದು, ಮುಂಬಯಿಯ ಖ್ಯಾತ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರ ಜತೆಗೆ ಸೇರಿಕೊಂಡು ಪಂಚರಂಗಿ ಫಿಲ್ಮ್ಸ್ ಎಂಬ ಚಿತ್ರ ತಂಡವೊಂದರನ್ನು ಹುಟ್ಟು ಹಾಕಿದ್ದಾರೆ. ಸದಾಶಿವ ಶೆಟ್ಟಿ ಅವರು ಗುರು ಹೆಗ್ಡೆ ಜತೆಯಾಗಿ ಒಂದು ಸಿನಮಾ ನಿರ್ಮಾಣ ಮಾಡಲಿದ್ದು, ಆಗಸ್ಟ್ ತಿಂಗಳಲ್ಲಿ ಇದರ ರೂಪುರೇಷೆ ಅಂತಿಮಗೊಳ್ಳಲಿದೆ.

ಶಾಲಾ ದಿನಗಳಲ್ಲೇ ಇವರಿಗೆ ನಟನೆಯಲ್ಲಿ ಅಪಾರ ಆಸಕ್ತಿ, ಯಕ್ಷಗಾನದ ಪಾತ್ರ ಮಾಡಿ ಮೊದಲ ಬಾರಿಗೆ ವೇದಿಕೆ ಏರಿದ್ದರು. ಪಡುಬಿದ್ರಿಯಲ್ಲೇ ಪ್ರಾಥರ್ಮಿಕ ಶಿಕ್ಷಣ ಮುಗಿಸಿ ಉದ್ಯೋಗ ಅರಸಿ ಮುಂಬಯಿಗೆ ಹೋಗಿದ್ದ ಗುರುಪ್ರಸಾದ್‌ ಹೆಗ್ಡೆ ಅವರು ಅಲ್ಲೂ ರಂಗಭೂಮಿಯಲ್ಲಿ ಒಂದಷ್ಟು ಕೆಲಸ ಮಾಡಿದವರು. ಬಳಿಕ 26ನೇ ವಯಸ್ಸಿನಲ್ಲಿ ಮತ್ತೆ ಹುಟ್ಟೂರಿಗೆ ಮರಳಿ ಸ್ವಂತ ನಾಟಕ ತಂಡವೊಂದನ್ನು ಕಟ್ಟಿಕೊಂಡು ನೂರಾರು ನಾಟಕ ಪ್ರದರ್ಶನ ನೀಡಿದವರು. ಬಳಿಕ ಎರಡು ವರ್ಷಗಳ ಕಾಲ ಮಂಗಳೂರಿನ ಕುಸಲ್ದ ಕಲಾವಿದೆರ್‌ ತಂಡದ ಜತೆಯಲ್ಲಿ ನಟನಾಗಿ ದುಡಿದು ಮತ್ತಷ್ಟು ಅನುಭವವನ್ನು ಪಡೆದುಕೊಂಡವರು. ತನ್ನ 35ನೇ ವರ್ಷ ಪ್ರಾಯದಲ್ಲಿ ಹೊಸ ಅವಕಾಶಗಳನ್ನು ಶೋಧಿಸಿಕೊಂಡು 35ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದರು. ಅಲ್ಲಿ ಕಿರುತೆರೆಯಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಬೆಳೆದರು. ಮುಂದೆ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳ ಮೂಲಕ ಮಿಂಚಿದರು. ಸುಮಾರು 60-70 ಧಾರಾವಾಹಿಗಳಲ್ಲಿ ನಟಿಸಿರುವ ಪ್ರತಿಭೆ. ಜತೆಗೆ ಸುಮಾರು 22 ಸಿನಿಮಾಗಳಲ್ಲೂ ನಟಿಸಿದ್ದಾರೆ.

ಇವರು “ಪಿಂಗಾರ” ಮತ್ತು “ಕೊರೊಮಾ” ಎಂಬ ಎರಡು ತುಳು ಸಿನಿಮಾಗಳಲ್ಲೂ ನಟಿಸಿದ್ದು, ಈ ಪೈಕಿ ಕೊರೊಮಾ ಈ ತಿಂಗಳಲ್ಲಿ ತೆರೆಗೆ ಬರಲಿದೆ. “ಪಿಂಗಾರ” ರಾಷ್ಟ್ರಮಟ್ಟದ ಪ್ರಶಸ್ತಿಗೂ ಭಾಜನವಾಗಿದೆ. ಕನ್ನಡದಲ್ಲಿ ಪುನೀತ್, ಸುದೀಪ್‌, ಶ್ರೀನಗರ ಕಿಟ್ಟಿ ಮುಂತಾದ ಖ್ಯಾತ ಕಲಾವಿದರ ಸಿನಿಮಾಗಳಲ್ಲೂ ನಟಿಸಿ ಗಮನ ಸೆಳೆದಿದ್ದಾರೆ. ಅಭಿ, ವಂಶಿ, ಆಕಾಶ್‌, ಕೆಂಪೇಗೌಡ, ವರದನಾಯಕ, ವಿಷ್ಣುವರ್ಧನ, ಸವಾರಿ, ಬೇರ ಮುಂತಾದ ಪ್ರಮುಖ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ಕವಲುದಾರಿ ಇವರು ನಟಿಸಿರುವ ಮೊದಲ ಧಾರಾವಾಹಿ. ಬಳಿಕ ಗಾಳಿಪಟ, ಕನ್ಯಾದಾನ, ಬಂತೇ ಬರುತಾ ಕಾಲ, ಕುಂಕುಮಭಾಗ್ಯ, ಪ್ರೀತಿ ಇಲ್ಲದ ಮೇಲೆ, ಕುಟುಂಬ, ಕುಲವಧು, ಉಯ್ಯಾಲೆ, ಪ್ರೀತಿ ಇಲ್ಲದ ಮೇಲೆ, ಸಾಗುತ ಸಾಗುತ ದೂರ ದೂರ, ಗಾಳಿಪಟ, ಯಾರಿವಳು, ಜಾನಕಿ ರಾಘವ, ಶುಭ ವಿವಾಹ, ಸಾಗರ ಸಂಗಮ, ಜೋಗುಳ, ಚಿಟ್ಟೆಹೆಜ್ಜೆ, ನಿನ್ನೊಲುಮೆಯಿಂದಲೇ ಮುಂತಾದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಗುರುಹೆಗ್ಡೆ ಅವರಿಗೆ ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಒಳ್ಳೆಯ ಹೆಸರು ತಂದು ಕೊಟ್ಟಿದೆ. ಈ ಸೀರಿಯಲ್ ಕರ್ನಾಟಕದ ಚಾನೆಲ್ ಗಳಲ್ಲಿ ಪ್ರಸಾರವಾಗುವ ಧಾರಾವಾಹಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.
ಈಗ ನಿರ್ಮಾಪಕರಾಗಿ ಅಮರ್ಥ ಸಿನಿಮಾ ನಿರ್ಮಾಣದಲ್ಲಿ ಬಿಝಿಯಾಗಿದ್ದಾರೆ. ಬಹಳಷ್ಟು ಹೊಸ ಕಲಾವಿದರಿಗೆ ಸಿನಿಮಾದಲ್ಲಿ ಅವಕಾಶ ಮಾಡಿ ಕೊಟ್ಟಿದ್ದಾರೆ.

ಗುರುಹೆಗ್ಡೆ ಮಂಗಳೂರಿನ ಜಯಶ್ರೀ ಇವರನ್ನು ಮದುವೆಯಾಗಿ ಮಾಣಿಕ್ ಹೆಗ್ಡೆ ಮತ್ತು ಭಗತ್ ಹೆಗ್ಡೆ ಇಬ್ಬರು ಪುತ್ರರೊಂದಿಗೆ ಸುಖೀ ಸಂಸಾರ ಹೊಂದಿರುತ್ತಾರೆ. ಪತ್ನಿ ಇವರ ಕಲಾಬದುಕಿಗೆ ಪ್ರೇರಣೆಯಾಗಿ ಬೆಂಬಲ ಕೊಡುತ್ತಾರೆ. ಭಗತ್ ಹೆಗ್ಡೆ ರಾಧಾಕಲ್ಯಾಣ ಧಾರಾವಾಹಿಯಲ್ಲಿ ಬಾಲ ನಟನಾಗಿ ಅಭಿನಯಿಸಿದ್ದಾರೆ. ತನಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಗುರುಹೆಗ್ಡೆ ಅವರು ಪಂಚರಂಗಿ ಫಿಲ್ಮ್ಸ್ ನಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿರುವ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರ ಪ್ರೋತ್ಸಾಹವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದಾರೆ.

ಶಿವಧ್ವಜ್ ಶೆಟ್ಟಿ ನಿರ್ದೇಶನದ ಕೊರಮ ಸಿನಿಮಾದಲ್ಲಿ ಇವರದ್ದು ವಿಭಿನ್ನ ಪಾತ್ರ. ಮಂಜಯ್ಯ ಹೆಗ್ಡೆಯ ಪಾತ್ರದಲ್ಲಿ ಅವರು ನಮ್ಮೊಳಗೆ ಒಬ್ಬರಾಗಿ ಬಿಡುತ್ತಾರೆ. ಅಷ್ಟರ ಮಟ್ಟಿಗೆ ಅವರ ಪಾತ್ರ ನಮ್ಮನ್ನು ಆವರಿಸಿ ಬಿಡುತ್ತದೆ. ಆಗಸ್ಟ್ 11 ರಂದು ಕೊರಮ ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.

Font Awesome Icons

Leave a Reply

Your email address will not be published. Required fields are marked *