ಚಾಮರಾಜನಗರ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಹಿತವನ್ನು ಮರೆತ ರಾಜ್ಯ ಸರ್ಕಾರ ಹಾಸಿಗೆ ದಿಂಬು ಹಾಕಿಕೊಂಡು ಘಾಡ ನಿದ್ರೆಯಲ್ಲಿದೆ ಎಂದು ಕನ್ನಡ ಚಳುವಳಿಗಾರರು ಚಾಮರಾಜನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಶ್ರೀ ಭುವನೇಶ್ವರಿ ವೃತ್ತದವರಿಗೆ ಮಗುವಿನ ಹಾಸಿಗೆಯನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ರಸ್ತೆ ತಡೆ ನಡೆಸಿದರು.
ಸತತವಾಗಿ 117 ನೇ ದಿನವಾದ ಶನಿವಾರವೂ ಕಾವೇರಿ ನದಿ ನೀರು ಹೋರಾಟ ಮುಂದುವರೆಸಿದ ಕನ್ನಡ ಚಳವಳಿಗಾರರು ಕೇಂದ್ರ ಸರ್ಕಾರವು ಕಾವೇರಿ ಸಮಸ್ಯೆ ಬಗೆಹರಿಸಲು ಮುಂದಾಗದೇ ಇರುವುದನ್ನು ಖಂಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಕಾವೇರಿ ನದಿ ವಿಚಾರದಲ್ಲಿ ಜನಪ್ರತಿನಿಧಿಗಳು ಮೌನವಾಗಿದ್ದು, ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದು, ರೈತರು ಬೆಳೆದ ಬೆಳೆಗಳು ನಾಶವಾಗಿದೆ ಪರಿಸ್ಥಿತಿ ಹೀಗಿದ್ದರೂ ಸಹ ಕಾವೇರಿ ನದಿ ನೀರು ನಿಯಂತ್ರಣ ಮಂಡಲಿ ತಮಿಳುನಾಡಿಗೆ ನೀರು ಹರಿಸುವಂತೆ ರಾಜ್ಯಕ್ಕೆ ಸೂಚನೆ ನೀಡುತ್ತಿರುವುದು ದುರಂತ ಎಂದರು.