ಕೊಡಗಿನಲ್ಲಿ ಹುಲಿ ದಾಳಿಗೆ ಬೆಚ್ಚಿ ಬಿದ್ದ ಜನ

ಮಡಿಕೇರಿ: ಕೊಡಗಿನಲ್ಲಿ ಹುಲಿಯ ದಾಳಿ ನಿಲ್ಲುವಂತೆ ಕಾಣಿಸುತ್ತಿಲ್ಲ. ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಹುಲಿಗಳು ಮನುಷ್ಯರು ಸೇರಿದಂತೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ಮನೆಯಿಂದ ಹೊರಹೋಗಿ ತೋಟಗಳಲ್ಲಿ ಕೆಲಸ ಮಾಡುವುದು ಕಾರ್ಮಿಕರಿಗೆ ಕಷ್ಟವಾಗಿದ್ದು, ಮನೆಯಿಂದ ಹೊರ ಬರಲು ಭಯ ಪಡುವಂತಾಗಿದೆ.

ಬಹುತೇಕ ಕಡೆ ಜಾನುವಾರುಗಳನ್ನು ಬೇಟೆಯಾಡಿ ಮಾಂಸದ ರುಚಿ ಕಂಡಿರುವ ಹುಲಿ ಹೊಂಚು ಹಾಕಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಹಾಡುಹಗಲೆ ಮೇಯಲು ಕಟ್ಟಿ ಹಾಕಿರುವ ಜಾನುವಾರುಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಿದೆ. ಇದರಿಂದ ರೊಚ್ಚಿಗೆದ್ದ ಬೆಳೆಗಾರರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲೆಯಲ್ಲಿ ಕಾಫಿಕೊಯ್ಲು ಆರಂಭವಾಗಿದ್ದು, ಕಾರ್ಮಿಕರೇ ಕೆಲಸಕ್ಕೆ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಹುಲಿ ಅಡ್ಡಾಡಿರುವ ವಿಚಾರ ಇನ್ನಷ್ಟು ಕಂಗೆಡಿಸಿದೆ. ತೋಟಗಳಲ್ಲಿ ಓಡಾಡಲು ಭಯಪಡುವಂತಾಗಿದೆ. ಈ ನಡುವೆ  ಪೊನ್ನಂಪೇಟೆ ತಾಲೂಕಿನ ನಿಡುಗುಂಬ ಗ್ರಾಮದ ಚೆನಿಯಪಂಡ ಬೋಪಣ್ಣಿ(ಬೋಪಯ್ಯ) ಎಂಬುವರಿಗೆ ಸೇರಿದ ಹಸುವನ್ನು ಮೇಯಲು ಕಟ್ಟಿಹಾಕಿದ್ದ ವೇಳೆ ಹಾಡುಹಗಲೇ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಪದೇ ಪದೇ ಹುಲಿ ಕಾಡು ಬಿಟ್ಟು ನಾಡಿಗೆ ಬಂದು ದಾಳಿ ನಡೆಸುತ್ತಿದ್ದು ಇದರಿಂದ ಜನ ಭಯದಲ್ಲಿ ಬದುಕುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *