ಜ.7ರಿಂದ ಕೆಮ್ತೂರು ದೊಡ್ಡಣ್ಣ ಶೆಟ್ರೆನ ನೆಂಪುದ ತುಳು ನಾಟಕ ಪರ್ಬ

ಉಡುಪಿ: ತುಳುಕೂಟ ಉಡುಪಿಯ ವತಿಯಿಂದ 22ನೇ ವರ್ಷದ ‘ಕೆಮ್ತೂರು ದೊಡ್ಡಣ್ಣ ಶೆಟ್ರೆನ ನೆಂಪುದ ತುಳು ನಾಟಕ ಪರ್ಬ’ ಜ.7ರಿಂದ 13ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಕೆಮ್ತೂರು ತುಳು ನಾಟಕ ಪರ್ಬವನ್ನು ಇತ್ತೀಚೆಗೆ ನಿಧನರಾದ ಹಿರಿಯ ರಂಗಕರ್ಮಿ ಕರಂದಾಡಿಲೀಲಾಧರ್ ಶೆಟ್ಟಿ ಅವರಿಗೆ ಅರ್ಪಿಸಲಿದ್ದೇವೆ ಎಂದರು. ಈ ಬಾರಿಯ ಸ್ಪರ್ಧೆಗೆ ಒಟ್ಟು 7 ತಂಡಗಳನ್ನು ಆಯ್ಕೆ ಮಾಡಲಾಗಿದೆ. ಜ.7ರಂದು ಸಂಜೆ 5:30ಕ್ಕೆ ಸ್ಪರ್ಧೆಯು ಶಾಸಕ ಯಶಪಾಲ್ ಸುವರ್ಣ ಅವರ ಮೂಲಕ ಉದ್ಘಾಟನೆಗೊಳ್ಳಲಿದೆ. ಪ್ರತಿದಿನ ಸಂಜೆ 6:30ಕ್ಕೆ ನಾಟಕ ಸ್ಪರ್ಧಾ ನಾಟಕ ಪ್ರದರ್ಶನಗೊಳ್ಳಲಿದೆ.
ಸ್ಪರ್ಧೆಯ ನಾಟಕಗಳು: ಮೊದಲ ದಿನದಂದು ಪುತ್ತೂರು ಗಯಾಪದ ಕಲಾವಿದೆರ್ ಉಬರ್ ಇವರಿಂದ ‘ಮುರಳಿ ಈ ಪಿರ ಬರೊಲಿ’, ನಂತರದ ದಿನಗಳಲ್ಲಿ ಕ್ರಮವಾಗಿ ಮುದ್ದಡ್ಕ ಶ್ರೀವಿಷ್ಣು ಕಲಾವಿದೆರ್ ಅವರಿಂದ ‘ಬ್ರಹ್ಮದಂಡ’, ಕುಡ್ಲ ಬಿ.ಸಿ.ರೋಡ್‌ನ ಓಂ ಶ್ರೀ ಕಲಾವಿದೆರ್ ಅವರಿಂದ ‘ಅಂದ್‌ಂಡ ಅಂದ್ ಪನ್ಲೆ’ ನಾಟಕ ಪ್ರದರ್ಶನಗೊಳ್ಳಲಿದೆ.

ಜ.10ರಂದು ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಕಲಾವಿದರಿಂದ ‘ಒಂಜಿ ದಮ್ಮ ಪದ’, 11ಕ್ಕೆ ಮಣಿಪಾಲದ ಸಂಗಮ ಕಲಾವಿದೆರ್ ಅವರಿಂದ ‘ಮರಣ ಗೆಂದಿನಾಯೆ’, 12ರಂದು ಕೊಡವೂರು ನವಸುಮ ರಂಗಮಂಚ ಕಲಾವಿದರಿಂದ ‘ಗಿಡ್ಡಿ’ ಹಾಗೂ ಜ.13ರಂದು ಮಲ್ಪೆಯ ಕರಾವಳಿ ಕಲಾವಿದೆರ್ ಅವರಿಂದ ‘ಎನ್ನುಲಾಯಿದಾಲ್’ ನಾಟಕಗಳನ್ನು ಪ್ರದರ್ಶನಗೊಳ್ಳಲಿದೆ.

ನಾಟಕ ಸ್ಪರ್ಧೆಯ ಮೂರು ವಿಜೇತ ತಂಡಗಳಿಗೆ ಕ್ರಮವಾಗಿ 20ಸಾವಿರ, 15ಸಾವಿರ, 10ಸಾವಿರ ರೂ.ನಗದು ಬಹುಮಾನ ನೀಡಲಾಗುವುದು. ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಅತ್ಯುತ್ತಮ ಮೂರು ಬಹುಮಾನಗಳನ್ನು ಫೆಬ್ರವರಿ ತಿಂಗಳಲ್ಲಿ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ನಾಟಕ ಸಂಚಾಲಕ ಬಿ.ಪ್ರಭಾಕರ ಭಂಡಾರಿ, ಪ್ರಕಾಶ ಸುವರ್ಣ ಕಟಪಾಡಿ ಹಾಗೂ ಭಾರತಿ ಟಿ.ಕೆ. ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *