ಪ್ರತಿಭಟನೆ ನಿರತರಾದ ಅತಿಥಿ ಉಪನ್ಯಾಸಕರು: ವಿದ್ಯಾರ್ಥಿಗಳ ಪರದಾಟ, ಪೋಷಕರ ಆತಂಕ

ಔರಾದ್: ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ನಿರತರಾಗಿರುವುದರಿಂದ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪಾಠ ಪ್ರವಚನಗಳು ಸ್ಥಗಿತಗೊಂಡಿವೆ. ಹೀಗಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕುಂಠಿತಗೊಂಡಿದೆ. ಇದು ಪೋಷಕರಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಕಳವಳವನ್ನು ಹೆಚ್ಚಿಸಿದೆ.

ಹೀಗಾಗಿ ಸರ್ಕಾರ ಶೀಘ್ರ ಅತಿಥಿ ಉಪನ್ಯಾಸಕರ ಬೇಡಿಕೆಗಳ ಕುರಿತು ನಿರ್ಧಾರ ಪ್ರಕಟಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ, ಬಿಎಸ್‌ಸಿ, ಬಿಕಾಂ, ಮೂರು ವಿಭಾಗದಲ್ಲಿ ಒಟ್ಟು 920 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗನುಸಾರವಾಗಿ ಇಲ್ಲಿ ಒಟ್ಟು 37 ಉಪನ್ಯಾಸಕರ ಅಗತ್ಯವಿದೆ. ಆದರೆ ಇಲ್ಲಿರುವುದು ಕೇವಲ 7 ಜನ ಉಪನ್ಯಾಸಕರು ಮಾತ್ರ. ಹೀಗಾಗಿ ಇಲ್ಲಿಯ ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿಸಿದ್ದಾರೆ. ಆದರೆ ಅವರೂ ಕಳೆದ ಒಂದು ತಿಂಗಳಿನಿಂದ ಮುಷ್ಕರ ನಡೆಸುತ್ತಿರುವುದರಿಂದ ಕಾಲೇಜಿಗೆ ಬಂದು ಹೋಗುವುದೇ ನಮ್ಮ ಕೆಲಸ ಆಗಿದೆ ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.

ನಮಗೆ ಕಷ್ಟವಾದರೂ ಮಕ್ಕಳು ಕಲಿತು ಮುಂದೆ ಬರಲಿ ಎಂದು ಅವರನ್ನು ಕಾಲೇಜಿಗೆ ಕಳುಹಿಸುತ್ತಿದ್ದೇವೆ. ಆದರೆ ಸರಿಯಾಗಿ ಪಾಠಗಳು ನಡೆಯದೇ ನಮಗೆ ಬೇಸರ ತಂದಿದೆ ಎಂದು ನಾರಾಯಣಪುರ ಗ್ರಾಮದ ಪಾಲಕ ತೇಜಾರಾವ ಜಾಧವ್ ಅಸಮಾಧಾನ ಹೊರ ಹಾಕಿದ್ದಾರೆ.

ಔರಾದ್ ಹಾಗೂ ಕಮಲನಗರ ತಾಲ್ಲೂಕು ಸೇರಿ ಈ ಗಡಿ ಭಾಗದಲ್ಲಿ ಏಕೈಕ ಸರ್ಕಾರಿ ಪದವಿ ಕಾಲೇಜು ಇದೆ. ಆದರೆ ಇಲ್ಲಿ ಉಪನ್ಯಾಸಕರ ಕೊರತೆಯಿಂದ 900ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ ಎಂದು ಎಬಿವಿಪಿ ಕಾರ್ಯಕರ್ತ ಅಶೋಕ ಶೆಂಬೆಳ್ಳಿ ತಿಳಿಸಿದ್ದಾರೆ.

ನಾವು ಕಳೆದ 35 ದಿನಗಳಿಂದ ನಿತ್ಯ ಕಾಲೇಜಿಗೆ ಬರುತ್ತಿದ್ದೇವೆ. ಒಂದೆರಡು ಕ್ಲಾಸ್ ನಡೆಯುತ್ತಿವೆ. ಉಳಿದಂತೆ ಹರಟೆ ಹೊಡೆದು ಮನೆಗೆ ಹೋಗುವುದೇ ನಮ್ಮ ಕೆಲಸ ಆಗಿದೆ ಎಂದು ವಿದ್ಯಾರ್ಥಿ ರತ್ನದೀಪ ಕಸ್ತೂರೆ ಹೇಳಿದ್ದಾರೆ.

ನಮ್ಮಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಕಾಯಂ ಉಪನ್ಯಾಸಕರಿಲ್ಲದೆ ಸಮಸ್ಯೆಯಾಗುತ್ತಿದೆ. ಆದರೂ ಅತಿಥಿ ಉಪನ್ಯಾಸಕರನ್ನು ಬಳಸಿಕೊಂಡು ಕಲಿಕೆಗೆ ಹಿನ್ನಡೆ ಆಗದಂತೆ ನೋಡಿ ಕೊಳ್ಳುತ್ತಿದ್ದೇವೆ ಎಂದು ಪ್ರಾಂಶುಪಾಲ ಸೂರ್ಯಕಾಂತ ಚಿದ್ರೆ ತಿಳಿಸಿದ್ದಾರೆ.

ಸೂರ್ಯಕಾಂತ ಚಿದ್ರೆ ಪ್ರಾಂಶುಪಾಲರುಹೊಸ ನೇಮಕಾತಿ ಆಗದೇ ಇರುವುದರಿಂದ ನಮಗೆ ಅತಿಥಿ ಉಪನ್ಯಾಸಕರೇ ಅನಿವಾರ್ಯವಾಗಿದೆ. ಈಗ ಅವರು ಮುಷ್ಕರ ನಡೆಸುತ್ತಿರುವುದರಿಂದ ನಿಗದಿತ ಸಮಯದಲ್ಲಿ ಪಾಠ ಬೋಧನೆಗೆ ತೊಂದರೆಯಾಗಿದೆ

Font Awesome Icons

Leave a Reply

Your email address will not be published. Required fields are marked *