ಚಾಮರಾಜನಗರ: ಏಪ್ರಿಲ್ 26 ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂಡಿನಗತ್ತ ಮೆಂದಾರೆ ಗ್ರಾಮದಲ್ಲಿ ನಡೆದ ಮತ ಬಹಿಷ್ಕಾರ ವೇಳೆ ಉಂಟಾದ ಮತಗಟ್ಟೆ ದ್ವಂಸ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಗ್ರಾಮಸ್ಥರಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಸಾಂತ್ವಾನ ಹೇಳುವ ಮೂಲಕ ಆತ್ಮಸ್ಥೈರ್ಯ ತುಂಬಿದರು.
ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮಕ್ಕೆ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್ ಮಹೇಶ್ ಮತ್ತು ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಬಿ ವೆಂಕಟೇಶ್ ಭೇಟಿ ನೀಡಿ ಸಾಂತ್ವಾನ ಹೇಳುವುದಲ್ಲದೆ ನಿಮ್ಮಂದಿಗೆ ನಾವಿದ್ದೇವೆ ಎಂದು ದೈರ್ಯ ತುಂಬಿದರು.
“ಹಳ್ಳದ ನೀರು “, “ಕೊಳ್ಳಿಯ ಬೆಳಕು. ” “ಇದೇ ನಮ್ಮ ಬದುಕು ” ಎಂದು ಕಷ್ಟ ಹೇಳಿದ ಗ್ರಾಮಸ್ಥರ ಮನವಿ ಆಲಿಸಿದ ಬಳಿಕ ರಾಜ್ಯ ಸರ್ಕಾರ , ಜಿಲ್ಲಾಡಳಿತ ವಿರುದ್ಧ ಎನ್.ಮಹೇಶ್ ಕಿಡಿ ಕಾರಿದರು.
ಸ್ವಾತಂತ್ರ್ಯ ಬಂದಾಗಿನಿಂದ ಈ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸದಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ, ತಕ್ಷಣವೇ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ, ಲೋಕಸಭಾ ಚುನಾವಣಾ ನೀತಿಸಂಹಿತೆ ಮುಗಿದ ಕೂಡಲೆ ಈ ಗ್ರಾಮಗಳಿಗೆ ರಸ್ತೆ ನೀರು, ವಿದ್ಯುತ್ ಕೊಡದಿದ್ದರೆ ಮುಂಬರುವ ಚುನಾವಣೆಗೂ ಇದೇ ಗತಿಯಾಗುತ್ತೆ ಎಂದು ಎಚ್ಚರಿಕೆ ನೀಡಿದ ಮಾಜಿ ಸಚಿವ ಎನ್. ಮಹೇಶ್,
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಗ್ರಾಮಸ್ಥರು ಮತ್ತೆ ಬಹಿಷ್ಕಾರ ಹಾಕಿದರೆ ಅವರ ಜೊತೆ ತಾವು ಪ್ರತಿಭಟನೆಗೆ ಕೂರುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇಂಡಿಗನತ್ತ ಗ್ರಾಮದ ಗ್ರಾಮಸ್ಥರ ಸಮಸ್ಯೆ ಬಗೆಹರಿಸಿ ನಾಗರೀಕ ಸಮಾಜದ ಮಾನ ಉಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಎನ್.ಮಹೇಶ್ ಚಾಟಿ ಬೀಸಿದರು.