ಚಾಮರಾಜನಗರ: ಚಾಮರಾಜನಗರ. ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಡಾ.ಹೆಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್ಗೆ ಗೋ ಬ್ಯಾಕ್ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಅವರ ನಾಮಪತ್ರ ಅಸಿಂಧುಗೊಳಿಸುವಂತೆ ಬಿಜೆಪಿ ದೂರು ನೀಡಿದೆ.
ಹಾಗಾದರೆ ಆಗಿದ್ದೇನು ಎಂಬುದನ್ನು ನೋಡಿದ್ದೇ ಆದರೆ ಸುನಿಲ್ ಬೋಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣ ಪತ್ರದಲ್ಲಿ ಪ್ರಮುಖ ಮಾಹಿತಿ ಮರೆಮಾಚಿರುವ ಆರೋಪ ಕೇಳಿ ಬಂದಿದೆ. ಆದ್ದರಿಂದ ಅವರ ನಾಮಪತ್ರ ತಿರಸ್ಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ಬಿಜೆಪಿ ದೂರು ನೀಡಿದೆ. ವೈವಾಹಿಕ ಜೀವನದ ಬಗ್ಗೆ ಮರೆಮಾಚಿರುವ ಆರೋಪ ಅವರ ಮೇಲಿದೆ.
ಪ್ರಮಾಣ ಪತ್ರದಲ್ಲಿ ಹೆಂಡತಿ, ಮಕ್ಕಳ ಹಾಗೂ ಹಿಂದೂ ಅವಿಭಕ್ತ ಕುಟುಂಬದ ಪ್ರಮುಖ ಮಾಹಿತಿ ಮುಚ್ಚಿಟ್ಟಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹೆಂಡತಿ, ಮಕ್ಕಳು ಹಾಗೂ ತಂದೆ ತಾಯಿಯ ಆಸ್ತಿ ವಿವರ ಘೋಷಿಸಿಲ್ಲ. ಸುನೀಲ್ ಬೋಸ್ ಸಲ್ಲಿಸಿರುವ ಪ್ರಮಾಣ ಪತ್ರ ಅಸಿಂಧುವಾಗಿದೆ. ಹೀಗಾಗಿ ಸುನೀಲ್ ಬೋಸ್ ನಾಮಪತ್ರ ಅಸಿಂಧುಗೊಳಿಸುವಂತೆ ದೂರು ನೀಡಿದೆ. ಹೆಂಡತಿ, ಮಕ್ಕಳ ಜೊತೆಗೆ ಇರುವ ಬಗ್ಗೆ ಛಾಯಾಚಿತ್ರಗಳನ್ನು ಲಗತ್ತಿಸಿ ದೂರು ನೀಡಲಾಗಿದೆ.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಅಭ್ಯರ್ಥಿ ಬಾಲರಾಜು ಏಜೆಂಟ್ ನಾರಾಯಣ ಪ್ರಸಾದ್ ಅವರಿಂದ ದೂರು ಸಲ್ಲಿಸಲಾಗಿದೆ.