ಟಾಲಿವುಡ್ ನಟ ಅಲ್ಲು ಅರ್ಜುನ್ ನಟಿಸಿದ ‘ಆರ್ಯ’ ಸಿನಿಮಾ ತೆರೆಕಂಡು 20 ವರ್ಷ ಕಳೆದಿದೆ. ಆ ದಿನಗಳು ಹೇಗಿದ್ದವು ಎಂಬುದನ್ನು ಈಗ ಅಲ್ಲು ಅರ್ಜುನ್ ನೆನಪಿಸಿಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿರುವ ಅವರು ನೆನಪಿನ ಪುಟ ತೆರೆದಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಅಲ್ಲು ಅರ್ಜುನ್ ಅವರು ಈ ವಿಚಾರವನ್ನು ವಿವರಿಸಿದ್ದಾರೆ. ‘ನಾನು ನಟಿಸಿದ ‘ಗಂಗೋತ್ರಿ’ ಸಿನಿಮಾ ಹಿಟ್ ಆಯಿತು. ಆದರೆ ನಾನು ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲ ಅಂತ ಅನಿಸಿದ್ದರಿಂದ ಒಳ್ಳೆಯ ಸಿನಿಮಾ ಅವಕಾಶಗಳು ನನಗೆ ಬರಲಿಲ್ಲ’ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಬಳಿಕ ‘ಆರ್ಯ’ ಸಿನಿಮಾದ ಅವಕಾಶ ಸಿಕ್ಕಿದ್ದು ಹೇಗೆ ಎಂದು ಅವರು ಮೆಲುಕು ಹಾಕಿದ್ದಾರೆ.
‘ಗಂಗೋತ್ರಿ ಸಿನಿಮಾ ಯಶಸ್ವಿ ಆಯಿತು. ಆದರೆ ನಟನಾಗಿ ನಾನು ಗುರುತಿಸಿಕೊಳ್ಳಲು ಸೋತೆ. ನಿತಿನ್ ನಟನೆಯ ‘ದಿಲ್’ ಸಿನಿಮಾವನ್ನು ನೋಡಲು ಹೋಗಿದ್ದಾಗ ಅಲ್ಲಿ ನನಗೆ ಸುಕುಮಾರ್ ಪರಿಚಯ ಆಯಿತು. ‘ಆರ್ಯ’ ಚಿತ್ರಕ್ಕಾಗಿ ಅವರು ನನ್ನನ್ನು ಭೇಟಿ ಮಾಡಿದರು. ಅವರು ಹೊಸ ನಿರ್ದೇಶಕನಾಗಿದ್ದರು. ಆದರೆ ಅವರು ಸ್ಕ್ರಿಪ್ಟ್ ಬರೆದ ರೀತಿ ನನಗೆ ತುಂಬ ಇಷ್ಟ ಆಯಿತು’ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ಅಲ್ಲಿಂದ ಶುರುವಾದ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಅವರ ಸ್ನೇಹ ‘ಪುಷ್ಪ 2’ ಸಿನಿಮಾದ ತನಕ ಬಂದಿದೆ. ಈ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ.