ಕೊಪ್ಪಳ: ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿ ಮುಂದುವರೆದಿವೆ.
ಕಳೆದ ವರ್ಷ ಕೂಡ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದಿತ್ತು. ಇನ್ನು ಕಳೆದ ವರ್ಷ 29 ನೇ ಸ್ಥಾನದಲ್ಲಿದ್ದ ಕಲಬುರಗಿ ಈ ಬಾರಿ 34 ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 34 ಸ್ಥಾನದಲ್ಲಿದ್ದ ಬೀದರ್ ಜಿಲ್ಲೆ 33ನೇ ಸ್ಥಾನ ಪಡೆದಿದೆ. ಇನ್ನು ಕಳೆದ ವರ್ಷ 16 ನೇ ಸ್ಥಾನ ಪಡೆದಿದ್ದ ಕೊಪ್ಪಳ ಜಿಲ್ಲೆ ದಿಢೀರನೆ ಅರ್ಧಕ್ಕರ್ದ ಕುಸಿದು 32 ಸ್ಥಾನದಲ್ಲಿದೆ. ಕಳೆದ ವರ್ಷ 30 ನೇ ಸ್ಥಾನದಲ್ಲಿದ್ದ ರಾಯಚೂರು ಈ ಬಾರಿ 31 ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳು ಇಪ್ಪತ್ತೇಳು ಮತ್ತು ಇಪ್ಪತ್ತೆಂಟನೇ ಸ್ಥಾನದಲ್ಲಿವೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ, ಕಲ್ಯಾಣ ಕರ್ನಾಟಕ ಬಾಗದ ಜಿಲ್ಲೆಗಳ ಫಲಿತಾಂಶ ಕಡಿಮೆಯಾಗಿರುವುದು ಈ ಭಾಗದ ಜನರ ಆತಂಕ ಹೆಚ್ಚಾಗುವಂತೆ ಮಾಡಿದೆ.
ಇನ್ನು ರಾಜ್ಯದಲ್ಲಿ ಈ ಬಾರಿ ಒಂದೇ ಒಂದು ಕಡೆ ಶಿಕ್ಷಕರ ಕೊರತೆ ಇಲ್ಲದ ಜಿಲ್ಲೆಗಳು ಎನ್ನುವ ಖ್ಯಾತಿಯನ್ನ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಹೊಂದಿದ್ದವು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೂಡ 16,041 ಅತಿಥಿ ಶಿಕ್ಷಕರನ್ನು ನೇಮಕ ಮಾಡಿತ್ತು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಅಕ್ಷರ ಆವಿಷ್ಕಾರ ಯೋಜನೆಯಡಿ, 2618 ಅಕ್ಷರ ಮಿತ್ರರು ಎನ್ನುವ ಅತಿಥಿ ಶಿಕ್ಷಕರನ್ನು ಕೆಕೆಆರ್ಡಿಬಿ ಯಿಂದ ನೇಮಕ ಮಾಡಲಾಗಿತ್ತು. ಅವರಿಗೆ ಗೌರವಧನವನ್ನು ನೀಡಲು ಮಂಡಳಿ ಬರೋಬ್ಬರಿ 18.34 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿತ್ತು.