ಹೈದರಾಬಾದ್: ಕಾಂಗ್ರೆಸ್ ಪಕ್ಷ ರಾಮ ವಿರೋಧಿ, ಸನಾತನ ಧರ್ಮ ವಿರೋಧಿಯಾಗಿದೆ. ದೇಶ ವಿರೋಧಿ ಪಕ್ಷಗಳೊಂದಿಗೆ ಕೈ ಜೋಡಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಅವರು ತೆಲಂಗಾಣದ ಪೆದ್ದಪಲ್ಲಿಯಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿ, ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂಗೆ ಹೋಲಿಸುವಾಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸುಮ್ಮನಿದ್ದರು ಎಂದರು.
ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಗೊಳಿಸುತ್ತದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ನಡ್ಡಾ ಅವರು ತಿರುಗೇಟು ನೀಡಿದ್ದು, ‘ಕೆಟಲ್ ಅನ್ನು ಕಂಡು ಮಡಕೆ ಕಪ್ಪು ಎಂದಿತಂತೆ’ ಎಂದು ಪರೋಕ್ಷವಾಗಿ ಕುಟುಕಿದರು.
2004ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗದವರ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡಿತ್ತು. ಕರ್ನಾಟಕದಲ್ಲಿಯೂ ಒಬಿಸಿಗಳ ಮೀಸಲಾತಿಯನ್ನು ಮೊಟಕುಗೊಳಿಸಿ ಮುಸ್ಲಿಮರಿಗೆ ನೀಡಿತ್ತು.
ಆದರೆ ಬಿಜೆಪಿ ಸರ್ಕಾರ ಅದನ್ನು ತೆಗೆದುಹಾಕಿತು ಎಂದು ಹೇಳಿದರು. ಈ ವೇಳೆ ಬಿಆರ್ಎಸ್, ಎಐಎಂಐಎಂ ಪಕ್ಷಗಳ ವಿರುದ್ಧವೂ ನಡ್ಡಾ ವಾಗ್ದಾಳಿ ನಡೆಸಿದರು.