ಕೊಣನೂರು: ರಾಮನಾಥಪುರ ಹೋಬಳಿಯ ಕೇರಳಾಪುರದ ಶ್ರೀ ರಾಮ ಕೈಮಗ್ಗ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘಕ್ಕೆ ಶಾಸಕ ಎ.ಮಂಜು ರವರ ಪುತ್ರಿ ಡಾ. ಲಗ್ಮ ಗೌಡರವರು ಭೇಟಿ ನೀಡಿ ವೀಕ್ಷಣೆ ಮಾಡಿದರು.
ನಂತರ ಮಾತನಾಡಿದ ಅವರು ಈ ಹಿಂದೆ ಕೈಮಗ್ಗಕ್ಕೆ ಹೆಸರುವಾಸಿಯಾಗಿದ್ದ ಕೇರಳಾಪುರದಲ್ಲಿ ಈಗ ಕೈಮಗ್ಗಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು ಇವುಗಳನ್ನು ಪುನಶ್ಚೇತನಗೊಳಿಸಲು ಮುಂದಿನ ದಿನಗಳಲ್ಲಿ ನಾನು ವೈಯಕ್ತಿಕವಾಗಿ ಸಹಕಾರ ನೀಡಲಾಗುವುದು ಹಾಗೂ ತಂದೆ ಶಾಸಕ ಎ.ಮಂಜು, ತಮ್ಮ ಮಡಿಕೇರಿ ಶಾಸಕ ಡಾ. ಮಂಥರ್ಗೌಡ ರವರ ಮೂಲಕವೂ ಸಹಕಾರ ಕೊಡಿಸಲಾಗುವುದು. ಕೇರಳಾಪುರದಲ್ಲಿ ನೇಯುವ ಬಟ್ಟೆಗಳಿಗೆ ಬೆಂಗಳೂರಿನಲ್ಲಿ ಉತ್ತಮ ಮಾರುಕಟ್ಟೆ ದೊರಕುವ ಹಾಗೆ ಮಾಡಲಾಗುವುದು ಎಂದು ತಿಳಿಸುತ್ತಾ, ಕರ್ನಾಟಕದ ಕೈಮಗ್ಗ ಕ್ಷೇತ್ರಕ್ಕೆ ತುರ್ತು ಬೆಂಬಲದ ಅಗತ್ಯವಿದ್ದು ಸರಕಾರವು ಈ ನಿಟ್ಟಿನಲ್ಲಿ ಕೈಮಗ್ಗಗಳಿಗೆ ಹಾಗೂ ನೇಯ್ದ ಬಟ್ಟೆಗಳಿಗೆ ಉತ್ತಮ ಮಾರುಕಟ್ಟೆ ದೊರಕುವಂತೆ ಮಾಡಿ ನೇಕಾರರಿಗೆ ಪ್ರೋತ್ಸಾಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ರಾಮ ಕೈಮಗ್ಗ ನೇಕಾರರ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ, ನಿರ್ದೇಶಕರುಗಳು, ಗ್ರಾ.ಪಂ ಸದಸ್ಯ ಕೆ.ಎಂ.ಶಿವಣ್ಣ, ಕಾಳೇನಹಳ್ಳಿ ಗಣೇಶ್, ಮುಖಂಡರುಗಳು, ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.