ಅಕ್ಷಯ್ ಕುಮಾರ್ ನಟನೆಯ ಒಂಬತ್ತು ಸಿನಿಮಾಗಳು ಒಂದರ ಹಿಂದೊಂದು ಮಕಾಡೆ ಮಲಗಿವೆ, ಇದೀಗ ಅಕ್ಷಯ್ರ ಹೊಸ ಸಿನಿಮಾ ‘ಓ ಮೈ ಗಾಡ್ 2’ ಬಿಡುಗಡೆ ಆಗಿದೆ. ಸಿನಿಮಾ ಸಾಧಾರಣ ಆರಂಭವನ್ನು ಪಡೆದುಕೊಂಡಿದ್ದು, ವೀಕೆಂಡ್ನಲ್ಲಿ ಕಲೆಕ್ಷನ್ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಹೀಗಿರುವಾಗ ಸಿನಿಮಾದ ಕತೆ ತುಸು ವಿವಾದಕ್ಕೆ ಕಾರಣವಾಗಿದೆ. ಕೆಲವು ಹಿಂದೂಪರ ಸಂಘಟನೆಗಳು ಸಿನಿಮಾದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, ಬಾಯ್ಕಾಟ್ಗೆ ಒತ್ತಾಯಿಸಿವೆ. ಒಂದು ಸಂಘಟನೆಯಂತೂ ಅಕ್ಷಯ್ಕುಮಾರ್ಗೆ ಹೊಡೆದವರಿಗೆ ನಗದು ಪ್ರಶಸ್ತಿಯನ್ನು ಘೋಷಿಸಿದೆ.
ಸಿನಿಮಾದಲ್ಲಿ ಶಿವನ ಭಕ್ತರಿಗೆ, ಶಿವಗಣಕ್ಕೆ ಅಪಮಾನ ಮಾಡಲಾಗಿದೆ ಎಂದು ಹಿಂದೂಪರ ಸಂಘಟನೆ ಸದಸ್ಯರು ಆಕ್ಷೇಪಿಸಿದ್ದು, ರಾಷ್ಟ್ರೀಯ ಹಿಂದೂ ಪರಿಷದ್ನ ಸದಸ್ಯರು ಅಕ್ಷಯ್ ಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಅಲ್ಲದೆ ಸಿನಿಮಾದ ಪ್ರದರ್ಶನವನ್ನು ಈ ಕೂಡಲೇ ಬಂದ್ ಮಾಡುವಂತೆ ಒತ್ತಾಯಿಸಿದ್ದಾರೆ. ಇನ್ನು ಆಗ್ರಾದ ಹಿಂದೂಪರ ಸಂಘಟನೆಯೊಂದು ಸಿನಿಮಾ ವಿರುದ್ಧ ಆಕ್ರೋಶ ಹೊರಹಾಕಿದ್ದು, ನಟ ಅಕ್ಷಯ್ ಕುಮಾರ್ ಕಪಾಳಕ್ಕೆ ಹೊಡೆದವರಿಗೆ ಅಥವಾ ಅವರ ಮೇಲೆ ಉಗಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ.