ಮೈಸೂರು: ಎಲ್ಲರೂ ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜು ಬಳಿಯ ಶವಾಗಾರದ ಬಳಿ ಎದುರಾಗಿದೆ. ಇದಕ್ಕೆ ಶವಾಗಾರದ ಶೀತಲ ಯಂತ್ರಗಳು ದುರಸ್ತಿಗೀಡಾಗಿರುವುದೇ ಕಾರಣವಾಗಿದ್ದು, ಈ ಬಗ್ಗೆ ಸಂಬಂಧಿಸಿದವರ ನಿರ್ಲಕ್ಷ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರಿನ ಶವಾಗಾರದಲ್ಲಿ ಶೀತಲ ಯಂತ್ರಗಳು ಕೆಟ್ಟು ನಿಂತಿದ್ದು ಇದನ್ನು ಸಕಾಲದಲ್ಲಿ ದುರಸ್ತಿಗೊಳಿಸದ ಕಾರಣದಿಂದಾಗಿ ಶವಪರೀಕ್ಷೆಗಾಗಿ ಬರುತ್ತಿರುವ ಮೃತದೇಹಗಳು ಕೊಳೆತು ನಾರುತ್ತಿವೆ. ಈಗಾಗಲೇ ಇಲ್ಲಿನ ಸಿಬ್ಬಂದಿಗಳು ಶೀತಲಯಂತ್ರಗಳನ್ನು ದುರಸ್ತಿಪಡಿಸುವಂತೆ ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯ ವಹಿಸಿರುವ ಕಾರಣದಿಂದಾಗಿ ಸಿಬ್ಬಂದಿಗಳು ಪರದಾಡುವಂತಾಗಿದೆ.
ಶವಪರೀಕ್ಷೆ ನಂತರ ಮೃತದೇಹಗಳನ್ನು ಕೊಂಡೊಯ್ಯಲು ಬರುವ ಸಂಬಂಧಿಕರುವ ಶವಾಗಾರದ ದುಃಸ್ಥಿತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇದರ ನಡುವೆ ಶವಾಗಾರದ ಸಿಬ್ಬಂದಿ ದುರ್ವಾಸನೆ ನಡುವೆ ಮೂಗುಮುಚ್ಚಿಕೊಂಡು ಕಾರ್ಯ ನಿರ್ವಹಿಸಬೇಕಾಗಿದೆ. ಇದು ಹೀಗೆ ಮುಂದುವರೆದರೆ ಇನ್ನು ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕೋ?
ಇನ್ನಾದರೂ ಕೆಟ್ಟುನಿಂತ ಶೀತಲ ಯಂತ್ರಗಳನ್ನು ದುರಸ್ತಿಗೊಳಿಸಿ ದುರ್ವಾಸನೆ ಬೀರುವ ಹಂತ ತಲುಪಿರುವ ಮೃತದೇಹಗಳಿಗೆ ಮುಕ್ತಿನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.