ಚಾಮರಾಜನಗರ : ಏಪ್ರಿಲ್ 25ರಿಂದ ಕೆ ವಿ ಎನ್ ದೊಡ್ಡಿ, ಎಂ ಟಿ ದೊಡ್ಡಿ ಗ್ರಾಮದ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವು ವಿತರಿಸಿಲ್ಲ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ .
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರ ಬರ ತಾಲೂಕು ಎಂದು ಘೋಷಣೆಯಾದ ನಂತರ ಜಾನುವಾರುಗಳ ರಕ್ಷಣೆಗಾಗಿ ಜಿಲ್ಲಾಡಳಿತದ ಮೂಲಕ ತಾಲೂಕಿನಲ್ಲಿ 16 ಗೋಶಾಲೆಗಳನ್ನು ತೆರೆದು ಸಂರಕ್ಷಿಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿತ್ತು.
ಏಪ್ರಿಲ್ 19 ರಲ್ಲಿ ಪ್ರಾರಂಭವಾದ ಗೋಶಾಲೆಗಳು 25 ರವರೆಗೆ ಮೇವು ವಿತರಿಸಿ ಚುನಾವಣೆ ಇರುವುದರಿಂದ ಮೇವು ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಚುನಾವಣೆ ಮುಗಿದು ಎಂಟು ದಿನಗಳು ಕಳೆದರೂ ಮೇವು ವಿತರಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಮೇ 2 ರಂದು ಚಾಮರಾಜನಗರ ಜಿಲ್ಲಾಧಿಕಾರಿ ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ತುರ್ತಾಗಿ ಗೋಶಾಲೆಗಳ ಮೇವು ಸರಬರಾಜು ಮಾಡುವಂತೆ ಸೂಚನೆ ನೀಡಿದ್ದರು ಹಾಗೂ ಸ್ಥಳೀಯ ರೈತರಿಂದ ನೀವು ಖರೀದಿಸಿ ರೈತರಿಗೆ ನೀಡಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು .
ಹನೂರು ತಾಲ್ಲೂಕಿನಲ್ಲಿ ಎರಡು ಗೋಶಾಲೆಗಳಲ್ಲಿ 1250 ಕ್ಕೂ ಹೆಚ್ಚು ಜಾನುವಾರುಗಳಿದ್ದು ಜಿಲ್ಲಾಡಳಿತ ತೆರೆದಿರುವ ಗೋಶಾಲೆಗಳ ನಿರ್ವಹಣೆ ಇಲ್ಲದೆ ಮೇವು ಸಹ ಸಿಗದೇ ಪರಿತಪಿಸುವಂತಾಗಿದೆ.