ಜೆ.ಪಿ. ಹೆಗ್ಡೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೇಳಿದಂತೆ ನಡೆದುಕೊಂಡಿದೆ. ಚುನಾವಣೆಗೆ ಮೊದಲು ನೀಡಿನ 5 ಗ್ಯಾರಂಟಿಗಳ ಭರವಸೆಯನ್ನು ಈಡೇರಿಸಿದೆ. ಆದರೆ, ಬಿಜೆಪಿ ಸರಕಾರ ಆಡಿದಂತೆ ನಡೆದುಕೊಂಡಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಚಿಕ್ಕಮಗಳೂರಿನ ವಿವಿಧ ಕಡೆಗಳಲ್ಲಿ ಮತಪ್ರಚಾರ ನಡೆಸಿ ಮಾತನಾಡಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಬೆಲೆ ಕಡಿಮೆಯಾಗಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಯಾಕೆ ಕಡಿಮೆ ಮಾಡಿಲ್ಲ? ವರ್ಷಕ್ಕೆ 2 ಕೋಟಿ, 10 ವರ್ಷಕ್ಕೆ 20 ಕೋಟಿ ಉದ್ಯೋಗ ನೀಡುವ ಭರವಸೆ ಯಾಕೆ ಈಡೇರಿಸಿಲ್ಲ ಎಂದು ಅವರು ಪ್ರಶ್ನಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ., 2 ಲಕ್ಷ ರು.ವರೆಗೆ ಸಾಲ ಮನ್ನಾ, ನಿರುದ್ಯೋಗಿ ಯುವಕರಿಗೆ 1 ಲಕ್ಷ ರೂ. ವೇತನ ಇತ್ಯಾದಿ ಭರವಸೆಗಳನ್ನು ನೀಡಿದೆ. ಸರ್ಕಾರದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವ ಗ್ಯಾರಂಟಿಯನ್ನು ನಾನು ನೀಡುತ್ತೇನೆ ಎಂದರು.

ನಿಮ್ಮ ಕೆಲಸ ಮಾಡುವುದಕ್ಕಾಗಿಯೇ ನನ್ನನ್ನು ಗೆಲ್ಲಿಸಿ, ನೀವು ಗೆಲ್ಲಿಸಿದ ಮೇಲೆ ಕೆಲಸ ಮಾಡುವ ಜವಾಬ್ದಾರಿ ನನ್ನದು, ಮಾಡದಿದ್ದರೆ ಕೇಳುವ ಹಕ್ಕು ನಿಮಗಿದೆ ಎಂದವರು ಹೇಳಿದರು. ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯಪಟ್ಟಣ ಹೋಬಳಿಯ ಬೆಳವಾಡಿ, ಸಿಂದಿಗೆರೆ, ಕುರುಬರಬೂದಿಹಾಳ ಗ್ರಾಮಗಳಲ್ಲಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕ ತಮ್ಮಯ್ಯ ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಗಾಯತ್ರಿ ಶಾಂತೆ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸಖರಾಯಪಟ್ಟಣ ಹೋಬಳಿ ಕಾಂಗ್ರೆಸ್‌ನ ಎಲ್ಲ ಘಟಕದ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.

Font Awesome Icons

Leave a Reply

Your email address will not be published. Required fields are marked *