KNOW YOUR CANDIDATE; ಹೃದಯತಜ್ಞ ಡಾ. ಸಿ.ಎನ್. ಮಂಜುನಾಥ್ ( ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ) » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು  :   ‘ಡಾ. ಸಿ.ಎನ್. ಮಂಜುನಾಥ್’ ಅವರ ಸಾಧನೆ ಎಂದೂ ಸ್ಫೂರ್ತಿದಾಯಕ   ಲಕ್ಷಾಂತರ ಹೃದ್ರೋಗಿಗಳಿಗೆ ಜೀವದಾನ ನೀಡಿ, ನೊಂದವರ ಕಣ್ಣೀರು ಒರೆಸುವ ಕಾಯಕದಲ್ಲಿ ಮನೆಮಾತಾಗಿರುವ ಹೃದಯವಂತ ಹೃದ್ರೋಗತಜ್ಞ

ಶ್ರೀಮಂತರಿಗೆ ಸಿಗುವ ಚಿಕಿತ್ಸಾ ಸೌಲಭ್ಯಗಳು ಕಡುಬಡವರಿಗೂ ಸಾಮಾನ್ಯ ಜನರಿಗೂ ನಿರ್ಗತಿಕರಿಗೂ ಕಡಿಮೆ ದರದಲ್ಲಿ ಸಿಗುವಂತಾಗಬೇಕೆಂದು ಕನಸು ಕಂಡು ಅದನ್ನು ನನಸು ಮಾಡಿದವರು ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತನ್ನು ಅಕ್ಷರಶಃ ನಿಜ ಮಾಡಿ ತೋರಿಸಿದವರು.

ಜಯದೇವ ಹೃದ್ರೋಗ ಸಂಸ್ಥೆಗೆ ಹೊಸ ಜೀವ ಕೊಟ್ಟವರು ‘ಚಿಕಿತ್ಸೆ ಮೊದಲು ನಂತರ ಹಣ ಪಾವತಿ’ ‘ಕಡತಗಳಿಗಿಂತ ಜೀವನ/ಜೀವ ಮುಖ್ಯ’ ‘ಮಾನವೀಯತೆಗೆ ಮೊದಲ ಆದ್ಯತೆ’ ನಿರ್ಣಯಗಳನ್ನು ಜಾರಿಗೆ ತಂದು ಲಕ್ಷಾಂತರ ಜನರ ಬದುಕಿಗೆ ನಂದಾದೀಪವಾಗಿ ಅವರ ಹೃದಯ ಗೆದ್ದವರು.

ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲ್ಲೂಕಿನ ಜೋಳೇನಹಳ್ಳಿಯ ಕೃಷಿ ಕುಟುಂಬದಲ್ಲಿ ಹುಟ್ಟಿದ ಒಬ್ಬ ಗ್ರಾಮಾಂತರ ಪ್ರತಿಭೆ ಡಾ. ಮಂಜುನಾಥ್. ಇವರು 1957ರ ಜುಲೈ 20ರಂದು ಜನಿಸಿದರು. ತಂದೆ ನಂಜಪ್ಪಗೌಡ ಅಲಿಯಾಸ್ ಚಾಮರಾಜೇಗೌಡ ಮತ್ತು ತಾಯಿ ಸೊಂಭಮ್ಮ. ಈ ದಂಪತಿಗಳಿಗೆ ಎಂಟು ಜನ ಮಕ್ಕಳು. ಐದು ಜನ ಹೆಣ್ಣು ಮಕ್ಕಳು ಮತ್ತು ಮೂವರು ಗಂಡು ಮಕ್ಕಳು ನಾಲ್ಕು ಹೆಣ್ಣು ಮಕ್ಕಳ ನಂತರ ಧರ್ಮಸ್ಥಳದ ಮಂಜುನಾಥನಿಗೆ ಹರಕೆ ಹೊತ್ತು ಹುಟ್ಟಿದವರು ಡಾ. ಸಿ.ಎನ್. ಮಂಜುನಾಥ್. ಮೂವರು ಗಂಡು ಮಕ್ಕಳಲ್ಲಿ ಮಂಜುನಾಥ್ ಹಿರಿಯ ಮಗ.

ಐದು ವರ್ಷದವರಿದ್ದಾಗ, ತಮ್ಮ ಹುಟ್ಟೂರಿನಲ್ಲಿಯೇ ಸರ್ಕಾರಿ ಶಾಲೆಗೆ ಸೇರಿಕೊಂಡರು. ಬಾಲ್ಯದಿಂದಲೇ ಬಹಳ ಚೂಟಿಯಾಗಿದ್ದ ಮಂಜುನಾಥಗೆ ಓದಿನಲ್ಲಿ ಅಪಾರವಾದ ಆಸಕ್ತಿ. ಅವರಿಗೆ ತಂದೆಯೇ ಮೊದಲ ಗುರು.

ಮೂರನೆಯ ತರಗತಿಯಲ್ಲಿ ಓದುತ್ತಿರಬೇಕಾದರೆ ‘ನಾಳೇ ನಾನೇ ಡಾಕ್ಟರ್’ ಎಂಬ ಪಾಠವಿತ್ತಂತೆ. ಶಿಕ್ಷಕರು ಆ ಪಾಠವನ್ನು ಮಾಡಬೇಕಾದರೆ. ಇಲ್ಲಿ ಯಾರಾದರೂ ಡಾಕ್ಟರ್ ಆಗುತ್ತೀರಾ? ಎಂದು ಕೇಳಿದಾಗ ನಾನು ಡಾಕ್ಟರ್ ಆಗ್ತಿನಿ ಸರ್ ಎಂದು ಹೇಳಿದ ಬಾಲಕ ಕೇವಲ ಮಂಜುನಾಥ್ ಮಾತ್ರ

ಓದಿನಲ್ಲಿ ಬಹಳ ಶ್ರದ್ಧೆ, ಆಸಕ್ತಿಯಿದ್ದ ಇವರು ಏಳನೆಯ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದರು. ಆನಂತರ ವಿದ್ಯಾಭ್ಯಾಸ ಮಾಡಲು ಹಳ್ಳಿಯನ್ನು ತೊರೆದರು. ಮೊದಲ ನಿಲ್ದಾಣ ಬೆಂಗಳೂರಿನ ರಾಜಾಜಿನಗರದಲ್ಲಿರುವ ವಿದ್ಯಾವರ್ಧಕ ಸಂಘದ ಶಾಲೆ.

ಆ ಶಾಲೆಯಲ್ಲಿ ಪ್ರೌಢಶಿಕ್ಷಣಕ್ಕಾಗಿ ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಗೊಂಡರು. ಪ್ರಾರಂಭದಲ್ಲಿ ಮೂಲ್ನಾಲ್ಕು ತಿಂಗಳು ಬಹಳ ಕಷ್ಟವಾಯಿತು. ಏಕೆಂದರೆ, ಮಂಜುನಾಥ್ ಏಳನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಅಲ್ಲಿಗೆ ಬರುತ್ತಿದ್ದ ಶೇ. 70ರಿಂದ 80ರಷ್ಟು ವಿದ್ಯಾರ್ಥಿಗಳು  ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದರು. ಇಂಗ್ಲಿಷಿನಲ್ಲಿ ಅವರಿಗೆ ಹೆಚ್ಚು ಪ್ರಾವೀಣ್ಯತೆ ಇತ್ತು.

ವೈದ್ಯಕೀಯ ಶಿಕ್ಷಣ

ಆರಂಭದಲ್ಲಿ ಮಂಜುನಾಥ್ ಅವರು ಬಿ.ಎಸ್ಸಿ.(ಕೃಷಿ) ಓದಲು ಬೆಂಗಳೂರಿನ ಜಿಕೆವಿಕೆಯಲ್ಲಿ ಸೇರಿಕೊಂಡರು.  ಅಂದೇ ಸಾಯಂಕಾಲ ವೈದ್ಯಕೀಯ ಶಿಕ್ಷಣ ಎಂ.ಬಿ.ಬಿ.ಎಸ್.ಗೆ ಸೀಟು ಸಿಕ್ಕಿರುವುದು ತಿಳಿಯಿತು. ಬಾಲ್ಯದಿಂದಲೇ ವೈದ್ಯನಾಗಬೇಕೆಂಬ ಕನಸು ಕಂಡಿದ್ದ ಮಂಜುನಾಥ್ ಅವರ ಕನಸು ನನಸಾಗುವ ದಿನಗಳು ಆರಂಭವಾದವು. ಮರುದಿನ ಜಿಕೆವಿಕೆಗೆ ಹೋಗಿ ‘ನನಗೆ ಎಂ.ಬಿ.ಬಿ.ಎಸ್.ಗೆ ಸೀಟು ಸಿಕ್ಕಿದೆ. ದಯವಿಟ್ಟು ನನ್ನ ಅಂಕಪಟ್ಟಿಗಳನ್ನು ಮತ್ತು ಪ್ರವೇಶಕ್ಕೆ ಸಂಬಂಧಿಸಿದಂತೆ ಇತರೆ ದಾಖಲೆಗಳನ್ನು ವಾಪಸ್ಸು ಕೊಡಿ’ ಎಂದು ಕೇಳುತ್ತಾರೆ.

ಆದರೆ ಅವರು ನೀನು ಇಲ್ಲಿ ಈಗಾಗಲೇ ಸೇರಿಕೊಂಡಿದ್ದೀಯಾ ನೀನು ಇಲ್ಲಿಯೇ ಓದಬೇಕು ಅಂದರಂತೆ. ಮಂಜುನಾಥ್, ಇಲ್ಲ ಇಲ್ಲ ನನಗೆ ಮೆಡಿಕಲ್ ಸೀಟು ಸಿಕ್ಕಿದೆ. ದಯವಿಟ್ಟು ನೀವು ಸಹಕರಿಸಬೇಕೆಂದಾಗ ಅವರು ಕೊನೆಗೆ ಎಲ್ಲವನ್ನೂ ಕೊಟ್ಟರು. ಆನಂತರ ಇವರು 1975ರಲ್ಲಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ (ಎಂಎಂಸಿ) ಎಂ.ಬಿ.ಬಿ.ಎಸ್. ಓದಲು ಸೇರಿಕೊಂಡರು.

 

ಹೃದಯವಂತರು ಬಂದಿರುವುದರಿಂದ ಹೃದಯ ಇಲ್ಲದವರು ಕಾಣೆ- ಆರ್.ಅಶೋಕ್ ವ್ಯಂಗ್ಯ.

 

ಎಂ.ಬಿ.ಬಿ.ಎಸ್. ಮೊದಲ ಪ್ರಯತ್ನದಲ್ಲೇ ಆಯಿತು. 1982ರಲ್ಲಿ ಎಂ.ಬಿ.ಬಿ.ಎಸ್. ಅನ್ನು ಮುಗಿಸಿದರು.  ಅನಂತರ ಎಂ.ಡಿ.(ಜನರಲ್ ಮೆಡಿಸನ್) ಮಾಡಲು ಮೈಸೂರಿನಲ್ಲಿ ಸೇರ್ಪಡೆಗೊಂಡರು. ಆಮೇಲೆ ಬೆಂಗಳೂರಿಗೆ ವರ್ಗಾವಣೆ ಮಾಡಿಕೊಂಡು, ಬೆಂಗಳೂರು ವಿಶ್ವವಿದ್ಯಾನಿಲಯದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ 1985ರಲ್ಲಿ ಮುಗಿಸಿದರು.

1985ರಲ್ಲಿ ಎಂ.ಡಿ. ಮುಗಿಸಿ ತದನಂತರ ಮಣಿಪಾಲ್‍ನ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ (ಕೆಎಂಸಿ) ಡಿ.ಎಂ. ಕಾರ್ಡಿಯಾಲಜಿ ಉನ್ನತ ವ್ಯಾಸಂಗಕ್ಕಾಗಿ ಸೇರಿಕೊಂಡರು.

ವೃತ್ತಿ ಜೀವನ

1988ರಲ್ಲಿ ಡಿ.ಎಂ. ಕಾರ್ಡಿಯಾಲಜಿ ಮುಗಿಸಿ, ಅದೇ ವರ್ಷದಲ್ಲಿ ಬೆಂಗಳೂರಿನ ಹೃದ್ರೋಗ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನಕ್ಕೆ ದಾಪುಗಾಲಿಟ್ಟರು.

ವೃತ್ತಿ ಆರಂಭಿಸಿದಾಗಿನಿಂದ ಇಲ್ಲಿಯವರೆಗೂ ಬರೀ ಸಾಧನೆಗಳ ಮೆಟ್ಟಿಲುಗಳೇ, ಜಯದೇವ ಹೃದ್ರೋಗ ಸಂಸ್ಥೆಯನ್ನೇ ಇವರ ಕಾಯಕದ ಕರ್ಮಭೂಮಿಯನ್ನಾಗಿ ಮಾಡಿಕೊಂಡು, ಅನೇಕ ಮಹತ್ತರ ಬದಲಾವಣೆಗಳನ್ನು ತಂದರು.

ಇವರಿಗೆ 1996ರಲ್ಲಿ ಪ್ರಾಧ್ಯಾಪಕರಾಗಿ ಬಡ್ತಿ ಸಿಕ್ಕಿತು.  2006ರ ಜನವರಿಯಲ್ಲಿ ಡಾ. ಮಂಜುನಾಥ್ ಅವರೇ ನಿರ್ದೇಶಕರಾಗಿ ನೇಮಕಗೊಂಡರು. ಇದು ಇವರ ಜೀವನದ ಮತ್ತೊಂದು ಟರ್ನಿಂಗ್‌  ಪಾಯಿಂಟ್.

ಡಾ. ಮಂಜುನಾಥ್  ನಿರ್ದೇಶಕರಾದ ಆರಂಭದಲ್ಲಿ ಬಡರೋಗಿಗಳ ಉಚಿತ ಚಿಕಿತ್ಸೆಗೆಂದು ಸ್ವಲ್ಪವೂ ಹಣವಿರಲಿಲ್ಲ. ಇಂದು ವಿವಿಧ ಮೂಲಗಳಿಂದ ಸುಮಾರು 100 ಕೋಟಿ ರೂಗಳಿಗೂ ಹೆಚ್ಚು ಹಣವನ್ನು ಸಂಗ್ರಹಿಸಲಾಗಿದೆ.  ಅದರಲ್ಲಿ ಇದುವರೆವಿಗೂ ಒಂದು ರೂಪಾಯಿ ಖರ್ಚು ಮಾಡದೆ, ಅದರಿಂದ ಬರುವ ಬಡ್ಡಿಯಿಂದ ಬಡರೋಗಿಗಳಿಗೆ, ನಿರ್ಗತಿಕರಿಗೆ ಉಚಿತ ಚಿಕಿತ್ಸೆ, ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಂಸಾರಿಕ ಜೀವನ :

ಮಡದಿ ಅನಸೂಯ,  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹಿರಿಯ ಪುತ್ರಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಸಹೋದರಿ. ಡಾ.ಮಂಜುನಾಥ್‌ ದಂಪತಿಗೆ ಕೀರ್ತಿಗೊಬ್ಬ ಮಗ, ಆರತಿಗೊಬ್ಬ ಮಗಳು. ಮಗ ಡಾ. ಸಾತ್ವಿಕ್‌, ತಂದೆಯಂತೆಯೇ ಹೃದಯತಜ್ಞ. ಮಗಳು ಡಾ. ನಮ್ರತಾ, ಚರ್ಮರೋಗ ತಜ್ಞೆ.

ಮೈಸೂರು ವಿವಿ ವಿಶ್ರಾಂತ ಕುಲಪತಿ ಹಾಗೂ ಹೆಸರಾಂತ ರಾಸಾಯನಶಾಸ್ತ್ರಜ್ಞ ಪ್ರೊ.ಕೆ.ಎಸ್.ರಂಗಪ್ಪ ಅವರು ಡಾ.ಮಂಜುನಾಥ್‌ ಬೀಗರು. ಪ್ರೊ.ರಂಗಪ್ಪ ಅವರ ಹಿರಿಯ ಪುತ್ರ ಶ್ರೇಯಸ್‌ ರಂಗಪ್ಪ , ಡಾ.ನಮ್ರತಾ ಪತಿ.

key words : Dr. Manjunath, cardiologist, Bangalore rural, BJP, candidate

 

ENGLISH SUMMARY : 

“Dr. C.N. Manjunath’s achievement has always been an inspirational,  heart cardiologist who has donated life to millions of heart patients and wiped the tears of those who have suffered. In 1988, After completing cardiology, he made his career as an assistant professor at the Institute of Cardiology, Bangalore in the same year. From the beginning of his career till now, Jayadeva has made the Institute of Cardiology his karma Bhoomi and brought about many great changes.

His wife Anasuya is the eldest daughter of former Prime Minister H D Deve Gowda and sister of former Chief Minister H D Kumaraswamy and H D Revanna.

His son Dr. Satwik, like his father, is a cardiologist. Daughter Dr. Namrata, dermatologist.

Font Awesome Icons

Leave a Reply

Your email address will not be published. Required fields are marked *