ಕಾರ್ಕಳ: ಕೃಷಿ ಸ್ವಾವಲಂಬನೆ ಪ್ರತೀಕ ಕೃಷಿ ಮೂಲಕ ಜೀವನ ನಡೆಸಲು ಸೂಕ್ತ ಅವಕಾಶ ಇದೆ ಕೃಷಿ ಮನುಷ್ಯನ ಆರೋಗ್ಯ, ಆಯುಷ್ಯ, ಸಂಪತ್ತನ್ನು ವೃದ್ಧಿಸುತ್ತದೆ, ಕೃಷಿ ಮೂಲಕ ಮನುಷ್ಯ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯ ಎಂದು ಡಾ. ರಾಮಕೃಷ್ಣ ಆಚಾರ್ ತಿಳಿಸಿದರು.
ಅವರು ಮುನಿಯಾಲ್ ಗೋದಾಮದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಕೃಷಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು, ಕೃಷಿ ಯಾವತ್ತೂ ಬಡತನವಲ್ಲ ಬಡತನವನ್ನು ಹೊಡೆದೋಡಿಸುವ ಸಾಧನ. ದೇಶದ ಬೆನ್ನೆಲುಬಾಗಿರುವ ಕೃಷಿಕ ಹಲವಾರು ಸಮಸ್ಯೆಗಳನ್ನು ಎದುರಿಸಲಿಕ್ಕೆ ಆಧುನಿಕ ಕೃಷಿ ವಿಧಾನವೂ ಕಾರಣವೆನ್ನಬಹುದು.
ಅತಿಯಾದ ರಾಸಾಯನಿಕ ಬಳಕೆ ಭೂಮಿಯ ಫಲವತ್ತತೆಯನ್ನು ಕಡಿಮೆಯಾಗಿಸುತ್ತಿದೆ. ಬೆಳೆಯುವ ಕೃಷಿ ಜೊತೆ ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ, ಪಕ್ಷಿ ಸಾಕಣೆಗಳು ಕೃಷಿಕನ ಸಂಪತ್ತನ್ನು ವೃದ್ಧಿಸುತ್ತದೆ ಎಂದರು. ಹೈನುಗಾರಿಕೆ ಮೂಲಕ ಮನೆಬಳಕೆ ಬೇಕಾಗುವುದನ್ನು ಬಳಸಿಕೊಂಡು ಹಾಲು ಮಜ್ಜಿಗೆ ಬೆಣ್ಣೆ ತುಪ್ಪ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಅಧಿಕ ಲಾಭವನ್ನು ಗಳಿಸಬಹುದಾಗಿದೆ ಎಂದರು.
ವಿದ್ಯೆಯ ಜೊತೆಗೆ ಕೃಷಿ ಮನುಷ್ಯನ ಬೌಧಿಕ ಶಕ್ತಿಯನ್ನು ಕೂಡ ವಿಕಸನ ಗೊಳಿಸುತ್ತದೆ ಬರಡು ಭೂಮಿಯಲ್ಲಿ ಗಿಡ ಮರಗಳನ್ನು ಬೆಳೆಸುವ ಮೂಲಕ ಅರಣ್ಯ ಸಂಪತ್ತನ್ನು ವೃದ್ಧಿಗೊಳಿಸ ಬಹುದಾಗಿದೆ. ಅರಣ್ಯದ ಜೊತೆಗೆ ತೋಟಗಾರಿಕಾ ಬೆಳೆಗಳನ್ನು ಕೂಡ ಬೆಳೆಸಬಹುದಾಗಿದೆ ಎಂದರು.
ಅತೀ ಕಡಿಮೆ ಭೂಮಿಯಲ್ಲಿ ಯಾವ ರೀತಿಯ ಕೃಷಿಗಳನ್ನು ಮಾಡಬಹುದೆಂದು ಅವರು ಮಾಹಿತಿ ನೀಡಿದರು ಮಾತ್ರವಲ್ಲದೆ ಅತಿ ಕಡಿಮೆ ಭೂಮಿಯನ್ನು ಹೊಂದಿದರೂ ಮಾದರಿ ಕೃಷಿ ಮೂಲಕ ಇತರರಿಗೆ ಕೃಷಿ ಬಗ್ಗೆ ಮಾಹಿತಿ ನೀಡುವುದರ ಮೂಲಕವೂ ಅಪಾರ ಹಣ ಸಂಪಾದನೆ ಮಾಡಬಹುದಾಗಿದೆ ವಿವಿಧ ಕೃಷಿಗಳ ಅಭಿವೃದ್ದಿಗೆ ಸರಕಾರದಿಂದ ವಿವಿಧ ಸವಲತ್ತುಗಳು ಹಾಗೂ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಸವಿತಾ ಆರ್ ಅಚಾರ್, ರಕ್ಷತ್ ಅಚಾರ್ ಉಪಸ್ಥಿತರಿದ್ದರು