ಬೆಂಗಳೂರು: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಸೂರ್ಯನ ಶಾಖಕ್ಕೆ ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳು ತತ್ತರಿಸಿದೆ. ಜನರ ಗಂಟಲು ಒಣಗುತ್ತಿದೆ. ಮಳೆರಾಯನ ದರ್ಶನಕ್ಕಾಗಿ ಮಂದಿ ಎದುರು ನೋಡುತ್ತಿದ್ದು, ಮುಂಗಾರು ಮಳೆಯ ಕೊರತೆಯಿಂದ ತರಕಾರಿ ದರ ಹೆಚ್ಚಾಗಿದ್ದು, ಸಿಲಿಕಾನ್ ಸಿಟಿಯ ಜನರು ತರಕಾರಿ ಬೆಲೆ ಕಂಡು ಕಂಗಲಾಗಿದ್ದಾರೆ.
ಬಿಸಿಲಿಗೆ ತರಕಾರಿಗಳ ಫಸಲು ಇಳಿಕೆ ಕಂಡು ಎಲೆಗಳೆಲ್ಲಾ ಒಣಗಿ ಉದುರುತ್ತಿದೆ. ಬೇಡಿಕೆಗಿಂತ ಪೂರೈಕೆ ಕುಸಿತದ ಹಿನ್ನೆಲೆ ಬೆಲೆ ಏರಿಕೆ ಕಾಣುತ್ತಿದ್ದು, ಗ್ರಾಹಕರ ಕೈ ಸುಡುವಂತಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆ ಕಂಡುಬಂದಿದ್ದು, ಬೀನ್ಸ್ ದರ 200ರೂ. ಗಡಿ ತಲುಪಿದೆ. 1 ಕೆಜಿ ತಗೋಬೇಕೆಂದು ಮಾರ್ಕೆಟ್ಗೆ ಬಂದವರು ಇದೀಗ ಕಾಲು ಕೆಜಿ ತರಕಾರಿ ಖರೀದಿಸುವಂತಾಗಿದೆ.
ಗಗನಕ್ಕೇರಿದ ತರಕಾರಿಗಳ ದರ: ನಾಟಿಬೀನ್ಸ್ ₹60- ₹80 ₹170- ₹200, ಬಟಾಣಿ ₹80-₹100 ₹180-₹200, ಕ್ಯಾರೆಟ್ ₹30-₹40 ₹60-₹80, ಸೌತೆ ಕಾಯಿ ₹ 30-₹40 ₹70-₹80, ಟೊಮೆಟೊ ₹10-₹20 ₹30-₹40
2023ರಲ್ಲಿ ಮಳೆಯಿಲ್ಲದೆ ಬಹುತೇಕ ಕಡೆ ಕೃಷಿ ಬೆಳೆ ಹಾನಿಗೊಳಗಾಗಿತ್ತು. ಆದರೆ ಈ ವರ್ಷ ತರಕಾರಿ ಬೆಳೆಗಳಿಗೆ ನೀರಿನ ಅಭಾವ ಎದುರಾಗಿದೆ. ಬಿಸಿಲಿನ ಹೊಡೆತದಿಂದ ಫಸಲು ಕಡಿಮೆಯಾಗುತ್ತಿದೆ. ಬೆಲೆ ಏರಿಕೆಯಾಗಲು ಕಾರಣವಾಗಿದೆ.
ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರೆಟ್, ನಿಂಬೆ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳಾಂತ್ಯದಲ್ಲಿ ದರದಲ್ಲಿ ಏರಿಕೆ ಉಂಟಾಗಿದೆ.