ಚಿಕ್ಕಮಗಳೂರು : ಕೊಪ್ಪಾ ತಾಲೂಕಿನ ಕಾಡ್ಕೆರೆಯಲ್ಲಿ ಕುಡಿಯುವ ನೀರಿನ ಹಳ್ಳಕ್ಕೆ ಪ್ರಭಾವಿಗಳು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಶಿರಸ್ತೆದಾರ್ ಎಂ ಎಸ್ ಹೇಮಂತ್ಕುಮಾರ್ ಅವರನ್ನು ಗ್ರಾಮಸ್ಥರೊಂದಿಗೆ ಮಂಗಳವಾರ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು. ಕೊಪ್ಪಾ ತಾಲೂಕಿನ ಕಾಡ್ಕೆರೆಯಲ್ಲಿರುವ ನಾಲ್ಕು ದಲಿತ ಕುಟುಂಬಗಳು ಸಮೀಪದ ಗುಡ್ಡದಿಂದ ತಮ್ಮ ಮನೆ ಬಳಿ ಹರಿದು ಬರುವ ಕೆರೆಯ ನೀರನ್ನು ನೂರಾರು ವರ್ಷಗಳಿಂದ ಕುಡಿಯಲು ಬಳಸುತ್ತಿವೆ ಎಂದರು.
ಮೇಲ್ವರ್ಗದ ಕೆಲವು ಜನ ಇತ್ತೀಚೆಗೆ ಆ ಹಳ್ಳಕ್ಕೆ ತಡೆಗೋಡೆಯನ್ನು ನಿರ್ಮಿಸಿ ನೀರು ಹರಿಯದಂತೆ ಮಾಡಿದ್ದು ಇದರಿಂದಾಗಿ ನಾಲ್ಕು ದಲಿತ ಕುಟುಂಬಗಳು ಕುಡಿಯಲು ನೀರಿಲ್ಲದೇ ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಕುಡಿಯುವ ನೀರಿಗೆ ಅಡ್ಡ ಕಟ್ಟಿರುವುದನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ತಹಶೀಲ್ದಾರರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪದಾಧಿಕಾರಿಗಳು ಜಿಲ್ಲಾಡಳಿತ ಕೂಡಲೇ ತಡೆಗೋಡೆಯನ್ನು ತೆರೆವುಗೊಳಿಸಬೇಕು ದಲಿತ ಕುಟುಂಬಗಳಿಗೆ ಕುಡಿಯುವ ನೀರನ್ನು ಬಳಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಕೆಳಕುಳ್ಳಿ ಗ್ರಾಮದ ಸರ್ವೆ ನಂ ೬೧ ರಲ್ಲಿ ಹಂಗಾಮಿ ಸಾಗುವಳಿ ಚೀಟಿ ನೀಡಿರುವದಲಿತ ಕುಟುಂಬಗಳಿಗೆ ಖಾಯಂ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಲ್ಎಸ್ ಶ್ರೀಕಾಂತ್ ಜಿಲ್ಲಾ ಸಂಘಟನಾ ಸಂಚಾಲಕ ಡಿ ರಾಮು ಶೃಂಗೇರಿ ಕ್ಷೇತ್ರ ಸಂಚಾಲಕ ಎಸ್ ಹನುಮಂತ ಗ್ರಾಮಸ್ಥರಾದ ರವಿ ಶಾರದಾ ಮಹೇಶ್ಕೃಷ್ಣಮೂರ್ತಿ ಪವಿತ್ರ ನಿರ್ಮಲ ನಾಗೇಶ್ ಹಾಜರಿದ್ದರು