ಬೀದರ್: ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ ವಾಸವಾಗಿರುವ ಆದಿವಾಸಿ ಮಕ್ಕಳಿಗೆ ಬಸವ ಜಯಂತಿಯ ಅಂಗವಾಗಿ ಹಣ್ಣು-ಹಂಪಲು ವಿತರಿಸಿ ಮಕ್ಕಳಲ್ಲಿ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ತತ್ವಾದರ್ಶಗಳನ್ನು ತಿಳಿಸಲಾಯಿತು.
ನವೀನ ಪಬ್ಲಿಕ್ ಸ್ಕೂಲ್ನ ಅಧ್ಯಕ್ಷರಾದ ಕಾಮಶೆಟ್ಟಿ ಚಿಕ್ಕಬಸೆ ಅವರು ಹಣ್ಣು-ಹಂಪಲು ವಿತರಿಸಿ ಮಾತನಾಡಿ, ಇಡೀ ಮನುಕುಲಕ್ಕೆ ಒಳಿತನ್ನೆ ಬಯಸಿದ ಸಮಾನತೆಯ ಹರಿಕಾರ, ಕ್ರಾಂತಿ ಪುರುಷ, ವಿಶ್ವಗುರು ಬಸವಣ್ಣನವರ ವಚನಗಳಲ್ಲಿ ಅದ್ಭುತ ಶಕ್ತಿಯಿದೆ. ಹನ್ನೆರಡನೆ ಶತಮಾನದ ಬಸವಾದಿ ಶಿವಶರಣ ವಚನಗಳು ಎಂದೆಂದಿಗೂ ಪ್ರಸ್ತುತ. ವಚನ ಸಾಹಿತ್ಯ ನಮಗೆಲ್ಲ ದಾರಿದೀಪವಾಗಿದೆ. ಹಾಗಾಗಿ ನಾವು ದಿನನಿತ್ಯ ವಚನ ಸಾಹಿತ್ಯವನ್ನು ಓದುವುದು ಮತ್ತು ಕೇಳುವುದರ ಮೂಲಕ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರಳ ಹಾಗೂ ಸುಂದರ ಬದುಕಿಗೆ ವಚನ ಸಾಹಿತ್ಯ ಸಂಜೀವಿನಿ ಶಕ್ತಿಯಾಗಿದೆ ಎಂದರು.
ಗುರು ಬಸವಣ್ಣನವರು ಮೇಲು-ಕೀಳೆನ್ನದೆ ಸರ್ವರನ್ನು ಅಪ್ಪಿಕೊಂಡು ಜಾತಿಯತೆಯನ್ನು ಮೆಟ್ಟಿನಿಂತರು. ಸರ್ವರು ಸಮಾನರೆಂದು ಇಡೀ ಜಗತ್ತಿಗೆ ಸಾರಿದರು. ಅಂತಹ ಮಹಾನುಭಾವರ ಜಯಂತಿ ಕೇವಲ ಪೂಜೆ-ಪುನಸ್ಕಾರಗಳಿಗಷ್ಟೇ ಸೀಮಿತವಾಗಿರಿಸದೆ ಅವರ ತತ್ವಾದಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಬಡವ-ಶ್ರೀಮಂತ, ಮೇಲು-ಕೀಳೆನ್ನದೆ ಸರ್ವರೊಂದಿಗೆ ಸ್ನೇಹಭಾವದಿಂದ ಇದ್ದಾಗ ಮಾತ್ರ ನಮ್ಮ ಬದುಕಿಗೊಂದು ಅಥ ಬರುತ್ತದೆ ಎಂದು ಚಿಕ್ಕಬಸೆ ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷೆ ಶೀಲಾ ಚಿಕಬಸೆ ಉಪಸ್ಥಿತರಿದ್ದರು.