ಕೆ.ಆರ್.ಪೇಟೆ: ವರಹಾ ಜಯಂತಿಯ ಅಂಗವಾಗಿ ಕೃ?ರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಾಹಸ್ವಾಮಿಯ ಶಿಲಾಮೂರ್ತಿಗೆ ವಿಶೇಷ ಅಭಿಷೇಕ ನಡೆಯಿತಲ್ಲದೆ, ಸ್ವಾಮಿಯ ಉತ್ಸವ ಮೂರ್ತಿಗಳ ಅಡ್ಡಪಲ್ಲಕಿ ಉತ್ಸವ, ಶ್ರೀನಿವಾಸ ಕಲ್ಯಾಣ ನಡೆದಿದ್ದು, ನೆರೆದ ಭಕ್ತರು ಜಯಘೋಷ ಮೊಳಗಿಸಿದರು.
ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಎಳನೀರು, ಐನೂರು ಲೀಟರ್ ಕಬ್ಬಿನ ಹಾಲು, ಪವಿತ್ರ ಗಂಗಾಜಲ, ಹಸುವಿನತುಪ್ಪ, ಜೇನುತುಪ್ಪ, ಅರಿಶಿನ, ಶ್ರೀಗಂಧ, ಸುಗಂಧ ದ್ರವ್ಯಗಳಿಂದ ಅಭಿಷೇಕ ನಡೆಸಿ ಮಲ್ಲಿಗೆ, ಜಾಜಿ, ಸಂಪಿಗೆ, ಗುಲಾಬಿ, ಸೇವಂತಿಗೆ, ತುಳಸಿ, ಪವಿತ್ರ ಪತ್ರೆಗಳು ಸೇರಿದಂತೆ ಧವನ, ಕಮಲದಂತಹ ಐವತ್ತೆಂಟು ಬಗೆಯ ವಿವಿಧ ವಿಶೇಷ ಹೂವುಗಳಿಂದ ಪುಷ್ಪಾಭಿಷೇಕ ಮಾಡಿ ಲೋಕಕಲ್ಯಾಣರ್ಥವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ದುಷ್ಟನಾದ ಹಿರಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ಸಂರಕ್ಷಣೆ ಮಾಡಲು ಭಗವಂತನಾದ ಶ್ರೀಹರಿಯು ವರಾಹ ರೂಪವನ್ನು ತಾಳಿದ ನಕ್ಷತ್ರವೇ ರೇವತಿ ನಕ್ಷತ್ರವಾಗಿದ್ದು ಇಂದು ವರಹಸ್ವಾಮಿಯು ಅವತಾರ ಧರಿಸಿದ ದಿನವಾದ್ದರಿಂದ ಭೂವರಹನಾಥ ಸ್ವಾಮಿಯ ಹದಿನೇಳು ಅಡಿ ಎತ್ತರದ ಶಿಲಾ ಮೂರ್ತಿಗೆ ವಿಶೇಷವಾಗಿ ಅಭಿ?ಕ ಮಾಡಿ ಸಂಭ್ರಮಿಸಲಾಯಿತು. ವರಹಾ ಜಯಂತಿಯ ಅಂಗವಾಗಿ ಇಂದು ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಮೊಸರನ್ನ, ಬಿಸಿಬೇಳೆ ಭಾತ್, ಸಿಹಿಪೊಂಗಲ್ ಮತ್ತು ಸಜ್ಜಪ್ಪ ಪ್ರಸಾದವನ್ನು ವಿತರಿಸಲಾಯಿತು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹತ್ತು ಸಾವಿರಕ್ಕೂ ಹೆಚ್ಚಿನ ಭಕ್ತಾಧಿಗಳು ಇಂದು ಭೂವರಹನಾಥ ಕ್ಷೇತ್ರದಲ್ಲಿ ದೇಶದಲ್ಲಿಯೇ ಅಪರೂಪದ್ದಾಗಿರುವ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ ಹದಿನೇಳು ಅಡಿ ಎತ್ತರದ ಸ್ವಾಮಿಯ ಸುಂದರವಾದ ಶಿಲಾಮೂರ್ತಿಯನ್ನು ಕಣ್ತುಂಬಿಕೊಂಡರು.