ಮಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆ ನಾಳೆ(ಎಪ್ರಿಲ್.14) ಪ್ರಧಾನಿ ನರೇಂದ್ರ ಮೋದಿ ಅಚರು ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ಮೈಸೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೋದಿ, ಸಂಜೆ ಮಂಗಳೂರಿನಲ್ಲಿ ರೋಡ್ ಶೋ ಮೂಲಕ ಭರ್ಜರಿಯಾಗಿ ಪ್ರಚಾರ ನಡೆಸಲಿದ್ದಾರೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಕೈಗೊಳ್ಳುವ ರೋಡ್ ಶೋ ಸಮಯ ಬದಲಾಗಿದೆ. ಸಂಜೆ 7 ಗಂಟೆಯ ಬದಲಿಗೆ, 7.45 ರೋಡ್ ಶೋ ನಡೆಯಲಿದೆ ಎಂದು ತಿಳಿದುಬಂದಿದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ 4 ಗಂಟೆಗೆ ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಲ್ಕೂ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಅವರು ಮತಯಾಚನೆ ಮಾಡಲಿದ್ದು, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಅವರನ್ನು ಹುರಿದುಂಬಿಸಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನರು ಸೇರಲಿದ್ದು ಸಕಲ ಸಿದ್ಧತೆ ಮಾಡಲಾಗುತ್ತಿದೆ.
ಮಂಗಳೂರಿನಲ್ಲಿ ಸಂಜೆ 7.45ಕ್ಕೆ ಸುಮಾರು ಒಂದೂವರೆ ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ನಾರಾಯಣ ಗುರು ಸರ್ಕಲ್ನಿಂದ ನವಭಾರತ್ ಸರ್ಕಲ್ವರೆಗೆ ಮೋದಿ ಅವರು ರೋಡ್ ಶೋ ಕೈಗೊಳ್ಳಲಿದ್ದು, ಇಲ್ಲೂ ಲಕ್ಷಾಂತರ ಜನ ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.