ಬೆಂಗಳೂರು: ನಟ, ನಿರ್ದೇಶಕ ಶಂಕರ್ ನಾಗ್ ನಮ್ಮನ್ನು ಅಗಲಿ ದಶಕಗಳೇ ಕಳೆದರೂ ಕೂಡ ಅವರ ನೆನಪು ಸದಾ ಕನ್ನಡಿಗರ ಮನದಲ್ಲಿ ಹಸಿರಾಗಿರುತ್ತದೆ. ಆಟೋ ರಾಜ ಎಂದು ನಾಡಿನ ಎಲ್ಲಾ ಆಟೋ ರಿಕ್ಷಾ ಚಾಲಕರು ಅವರನ್ನು ತಮ್ಮ ಮನೆ ಮನದಲ್ಲಿ ತುಂಬಿಕೊಂಡಿದ್ದಾರೆ. ಸದ್ಯ ಕರ್ನಾಟಕ ಸರ್ಕಾರ ಈ ಚಾಲಕರಿಗೆ ಮತ್ತು ಕನ್ನಡಿಗರಿಗೆ ಸಿಹಿ ಸುದ್ದಿ ನೀಡುತ್ತಿದೆ.
ಅಸಂಘಟಿತ ವಾಹನ ಚಾಲಕರ ಶ್ರಮಕ್ಕೆ ಸಾರಿಗೆ ಇಲಾಖೆ ಗೌರವ ಸಲ್ಲಿಸಲು ಮುಂದಾಗಿದೆ. ವರ್ಷವಿಡೀ ಕೆಲಸ ಮಾಡುವ, ಅಸಂಘಟಿತ ವಲಯದ ಕಾರ್ಮಿಕರ ವ್ಯಾಪ್ತಿಯಲ್ಲಿ ಬರುವ ವಾಹನ ಚಾಲಕರ ಶ್ರಮಕ್ಕೆ ಗೌರವ ಸಲ್ಲಿಸಲು ಸರ್ಕಾರ ಮುಂದಾಗಿದೆ.
ಅಪಘಾತ ರಹಿತ ಚಾಲನೆ ಮಾಡಿದ ಚಾಲಕರನ್ನು ಗುರುತಿಸಿ ಪ್ರಶಸ್ತಿ ನೀಡಲು ಮತ್ತು ‘ಚಾಲಕರ ದಿನಾಚರಣೆ’ಯನ್ನು ಆಚರಿಸಲು ಕರ್ನಾಟಕ ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಸಾರಿಗೆ ಒಕ್ಕೂಟದ ವಿವಿಧ ಸಂಘಟನೆಗಳು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದರು. ಅವರ ಬೇಡಿಕೆಗಳ ಪಟ್ಟಿಯಲ್ಲಿ ಚಾಲಕರ ಶ್ರಮವನ್ನು ಗುರುತಿಸಿ, ಗೌರವಿಸುವ ಸಲುವಾಗಿ ‘ಚಾಲಕರ ದಿನಾಚರಣೆ’ಯನ್ನು ಆಚರಿಸಬೇಕು ಎಂಬ ಬೇಡಿಕೆಯನ್ನೂ ಇಡಲಾಗಿತ್ತು.