ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನದಲ್ಲಿರುವುದರಿಂದ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಅವರ ಪತ್ನಿ ಸುನಿತಾ ಕೇಜ್ರಿವಾಲ್ರನ್ನು ಆಪ್ ಆಯ್ದುಕೊಂಡಿದೆ.
ದೆಹಲಿ ಮದ್ಯ ಹಗರಣ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನಲ್ಲಿರುವ ಪತಿಯ ಬದಲಿಗೆ ಸುನಿತಾ ಆಪ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಪ್ರಚಾರ ಕಾರ್ಯಕ್ರಮ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಆರಂಭವಾಗಲಿದೆ ಎನ್ನಲಾಗಿದ್ದು, ಪ್ರಚಾರಕಿಯಾಗಿ ಸುನಿತಾ ಇದೇ ಮೊದಲ ಬಾರಿ ಕಾಣಿಸಿಕೊಳ್ಳಲಿದ್ದಾರೆ.
ಇದಕ್ಕೂ ಮೊದಲು ರಾಜಕೀಯದಲ್ಲಿ ತೊಡಗಿಸಿಕೊಳ್ಳದ ಸುನಿತಾ, ಪತಿಯ ಬಂಧನವಾದ ಬೆನ್ನಲ್ಲೇ ವೀಡಿಯೊ ಸಂದೇಶಗಳು ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ಮುನ್ನಲೆಗೆ ಬಂದಿದ್ದಾರೆ. ವಿಪಕ್ಷಗಳ ಸಮಾವೇಶಗಳಲ್ಲಿ ಭಾಗಿಯಾಗಿ ಕೇಜ್ರಿವಾಲ್ ಬಂಧನ ಖಂಡಿಸುವ ಕೆಲಸವನ್ನು ಬಿರುಸಿನಿಂದ ಮಾಡತೊಡಗಿದ್ದಾರೆ.