ಮುಂಬೈ: “ನಿದ್ದೆ ಮನುಷ್ಯನ ಹಕ್ಕು ಹಾಗೂ ಮೂಲಭೂತ ಅವಶ್ಯಕತೆಯಾಗಿದೆ. ಯಾರೂ ಇದನ್ನು ಕಸಿಯಬಾರದು” ಎಂಬುದಾಗಿ ಅರ್ಜಿಯೊಂದರ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಯೊಬ್ಬರನ್ನು ರಾತ್ರಿಯಿಡೀ ವಿಚಾರಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಹಾಗೂ ಮಂಜೂಷ ದೇಶಪಾಂಡೆ ಅವರು ಈ ಮೇಲಿನಂತೆ ಆದೇಶ ಹೊರಡಿಸಿದ್ದಾರೆ. “ಇ.ಡಿ ಅಧಿಕಾರಿಗಳು ಯಾರನ್ನೇ ಆಗಲಿ ವಿಚಾರಣೆ ನಡೆಸಲು, ಸಮನ್ಸ್ ನೀಡಲು, ಅವರ ಮನೆಗೆ ದಾಳಿ ನಡೆಸಿ ಪರಿಶೀಲನೆ ಮಾಡಲು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ನಿಯಮಿತ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು” ಎಂದು ಕೂಡ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.
“ನಿದ್ದೆ ಮನುಷ್ಯನ ಹಕ್ಕಾಗಿದೆ. ಅದೊಂದು ಸಾಮಾನ್ಯ ಅವಶ್ಯಕತೆಯಾಗಿದೆ. ಯಾರಾದರೂ ಮನುಷ್ಯನ ನಿದ್ದೆಯ ಹಕ್ಕನ್ನು ಕಸಿದುಕೊಂಡರೆ, ಆತನ ನಿದ್ದೆಗೆ ಭಂಗ ಮಾಡಿದರೆ ಅದು ಮನುಷ್ಯನ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅದರಲ್ಲೂ, ಇ.ಡಿ ಅಧಿಕಾರಿಗಳು ಹೊತ್ತಲ್ಲದ ಹೊತ್ತಲ್ಲಿ ದಾಳಿ ನಡೆಸಿ, ವಿಚಾರಣೆ ಮಾಡಿದರೆ ಖಂಡಿತವಾಗಿಯೂ ಅವರ ನಿದ್ದೆಗೆ ಭಂಗವುಂಟಾಗುತ್ತದೆ. ಯಾವುದೇ ವ್ಯಕ್ತಿಗೆ ಸರಿಯಾದ ನಿದ್ದೆ ಇಲ್ಲದಿದ್ದರೆ ಆತನ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.